ದೇಶ

ಪ್ರತ್ಯೇಕವಾದಿಗಳ ಬಂಧನಕ್ಕೆ ಮುಫ್ತಿ ಸರ್ಕಾರ ನಕಾರ, ಕೇಂದ್ರದಿಂದ ಬಂಧನ ಸಾಧ್ಯತೆ

Lingaraj Badiger

ಶ್ರೀನಗರ: ಕಾಶ್ಮೀರಿ ಪ್ರತ್ಯೇಕವಾದಿಗಳನ್ನು ಬಂಧಿಸಲು ಜಮ್ಮು ಮತ್ತು ಕಾಶ್ಮೀರದ ಮುಫ್ತಿ ಮೊಹಮ್ಮದ್ ಸಯೀದ್ ಸರ್ಕಾರ ನಿರಾಕರಿಸಿದೆ. ಆದರೆ ಕೇಂದ್ರ ಸರ್ಕಾರ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಭಾರತದ ವಿರೋಧದ ನಡುವೆಯೂ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಗೆ ಕಾಶ್ಮೀರಿ ಪ್ರತ್ಯೇಕವಾದಿಗಳಿಗೆ ಪಾಕಿಸ್ತಾನ ಆಹ್ವಾನ ನೀಡಿದ್ದು, ಒಂದು ವೇಳೆ ಮಾತುಕತೆಗಾಗಿ ಪಾಕಿಸ್ತಾನ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರನ್ನು ಭೇಟಿ ಮಾಡಲು ಪ್ರತ್ಯೇಕವಾದಿಗಳು ದೆಹಲಿಗೆ ಆಗಮಿಸಿದರೆ, ದೆಹಲಿ ವಿಮಾನ ನಿಲ್ದಾಣದಲ್ಲೇ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಪ್ರತ್ಯೇಕವಾದಿ ನಾಯಕರು ದೆಹಲಿಗೆ ಆಗಮಿಸಿದ್ದೇ ಆದರೆ ಅವರನ್ನು ಬಂಧಿಸಿ, ಭಾರತ-ಪಾಕ್ ಮಾತುಕತೆಯ ನಂತರ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಉಭಯ ದೇಶಗಳ ನಡುವೆ ಭಾನುವಾರ ಹಾಗೂ ಸೋಮವಾರ ರಾಷ್ಟ್ರೀಯ ಭದ್ರತಾ ಸಲಹೆಗಾಗರರ ಮಟ್ಟದ ಸಭೆ ನಡೆಯಲಿದೆ. ಏತನ್ಮಧ್ಯೆ ಪಾಕ್ ಹೈಕಮೀಷನ್ ಪ್ರತ್ಯೇಕತಾವಾದಿ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿತ್ತು. ಆದರೆ ಭಾರತ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಪ್ರತ್ಯೇಕತಾವಾದಿ ಮುಖಂಡರ ಜೊತೆ ಮಾತುಕತೆ ನಡೆಸಬೇಡಿ ಎಂದು ಎಚ್ಚರಿಕೆ ನೀಡಿತ್ತು.

ಮತ್ತೆ ಗೃಹಬಂಧನ
ಪ್ರತ್ಯೇಕತಾವಾದಿ ಮುಖಂಡರಾದ ಸೈಯದ್ ಶಾ ಗಿಲಾನಿ ಮತ್ತು ಶಬ್ಬೀರ್ ಶಾಗೆ ಜಮ್ಮು ಕಾಶ್ಮೀರ ಸರ್ಕಾರ ಮತ್ತೆ ಶುಕ್ರವಾರ ಗೃಹಬಂಧನ ವಿಧಿಸಿದ ಬೆಳವಣಿಗೆ ನಡೆದಿದೆ. ಗುರುವಾರ ಬೆಳಗ್ಗೆ ಪ್ರತ್ಯೇಕತಾವಾದಿ ಮುಖಂಡರನ್ನು ಗೃಹಬಂಧನದಲ್ಲಿ ಇರಿಸಿ ಎರಡೇ ತಾಸಿನೊಳಗೆ ಬಿಡುಗಡೆಗೊಳಿಸಿದ್ದರು.

SCROLL FOR NEXT