ದೇಶ

ಗರ್ಭಿಣಿ ತಾಯಿ ಕೊಂದು ಮಗನ ಅಪಹರಣ

ಮುಂಬೈ: ತುಂಬು ಗರ್ಭಿಣಿ ಮಹಿಳೆಯನ್ನು ಕೊಂದು ಆಕೆಯ (7) ಮಗನನ್ನು ಅಪಹರಣ ಮಾಡಿರುವ ಘಟನೆಯೊಂದು ಮುಂಬೈನಲ್ಲಿ ಗುರುವಾರ ನಡೆದಿದೆ.

ಅಪಹರಣಕಾರ ಮಗುವನ್ನು ಅಪಹರಿಸಿದ ಬಳಿಕ ಮಗುವಿನ ತಂದೆ ಅಂಬಲ ದೇವನಾಥ್ ಗೆ ಕರೆ ಮಾಡಿದ್ದಾನೆ. ಮಗುವನ್ನು ಅಪಹರಿಸಿರುವುದಾಗಿ ಮಾಹಿತಿ ನೀಡಿದ ಆತ ಪೊಲೀಸರಿಗೆ ಮಾಹಿತಿ ನೀಡದೆಯೇ ರು.1.5ಲಕ್ಷ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಹೆದರಿದ ಅಂಬಲ ದೇವನಾಥ್ ಕೂಡಲೇ ಹಣ ತರಲೆಂದು ಮನೆಗೆ ಬಂದಿದ್ದಾನೆ. ಆದರೆ, ಈ ವೇಳೆ ಆತನ ಮಡದಿ ಗಟ್ಕಿ ಸಿಂಗ್ ಗರೋಧರ್ (25) ಹಾಸಿಗೆ ಮೇಲೆ ರಕ್ತದ ಮಡುವಿನಲ್ಲಿ ಸತ್ತು ಮಲಗಿರುವ ದೃಶ್ಯ ಕಂಡುಬಂದಿದೆ.

ಈ ದೃಶ್ಯವನ್ನು ಕಂಡ ಅಂಬಲ ದೇವನಾಥ್ ಮೂರ್ಛೆ ಹೋಗಿ ನೆಲಕ್ಕೆ ಕುಸಿದಿದ್ದಾನೆ. ಹಲವು ಘಟನೆಗಳ ಬಳಿಕ ನೆರೆಮನೆಯ ವ್ಯಕ್ತಿಯೊಬ್ಬ ಅಂಬಲ ದೇವನಾಥ್ ಮನೆಗೆ ಬಂದಿದ್ದಾನೆ. ಈ ವೇಳೆ ಅಂಬಲ ದೇವನಾಥ್ ಹಾಗೂ ಆತನ ಮಡದಿ ಬಿದ್ದಿರುವ ದೃಶ್ಯ ಕಂಡು ಕೂಡಲೇ ನಲ್ಲಸೊಪರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಪಂಚನಾಮ ಕ್ರಮ ಜರುಗಿಸಿ ಸಾವನ್ನಪ್ಪಿದ್ದ ಮಹಿಳೆ ಗಟ್ಕಿ ಸಿಂಗ್ ಗರೋಧರ್ ಅವರ ದೇಹವನ್ನು ಶವ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಗಟ್ಕಿ ಸಿಂಗ್ ಅವರನ್ನು ಕುತ್ತಿಗೆ ಸೀಳಿರುವುದಾಗಿ ತಿಳಿದುಬಂದಿದ್ದು, ಅಪಹರಣಕ್ಕೊಳಗಾದ ಮಗುವಿಗಾಗಿ ಈಗಾಗಲೇ ತನಿಖೆ ಆರಂಭಿಸಲಾಗಿದೆ. ಮಗು ಅಪಹರಣವಾಗಿರುವುದರಿಂದ ಪ್ರಸ್ತುತ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

SCROLL FOR NEXT