ದೇಶ

ನಮಗೆ ನ್ಯಾಯ ಸಿಗೋಲ್ಲ ಎಂದು ಮೊದಲೇ ಗೊತ್ತಿತ್ತು: ನಿರ್ಭಯಾ ತಾಯಿ

Manjula VN

ನವದೆಹಲಿ: ನಮ್ಮ ದೇಶದ ಕಾನೂನು ವ್ಯವಸ್ಥೆ ಎಂದಿಗೂ ಬದಲಾಗಲ್ಲ. ನಮಗೆ ನ್ಯಾಯ ಸಿಗುವುದಿಲ್ಲ ಎಂದು ಮೊದಲೇ ಗೊತ್ತಿತ್ತು ಎಂದು ಅತ್ಯಾಚಾರಕ್ಕೊಳಗಾದ ಯುವತಿ ಜ್ಯೋತಿಸಿಂಗ್ ತಾಯಿ ಅಶಾದೇವಿ ಅವರು ಸೋಮವಾರ ಹೇಳಿದ್ದಾರೆ.

ದೆಹಲಿ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ವಿರೋಧ ನಡುವೆಯೂ ಬಾಲಾಪರಾಧಿ ಬಿಡುಗಡೆಯಾಗಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ನಿರ್ಭಯಾ ತಾಯಿ, ನಮಗೆ ನ್ಯಾಯ ಸಿಗುವುದಿಲ್ಲ ಎಂದು ಮೊದಲೇ ಗೊತ್ತಿತ್ತು. ನಮ್ಮ ದೇಶದ ಕಾನೂನು ವ್ಯವಸ್ಥೆ ಎಂದಿಗೂ ಬದಲಾಗಲ್ಲ. ಇನ್ನು ಯಾವ ಘಟನೆಗಾಗಿ ಕಾದು ಕುಳಿತಿದೆಯೋ ಗೊತ್ತಿಲ್ಲ. ಏನೇ ಆದರೂ, ಈ ಬಗೆಗಿನ ನಮ್ಮ ಹೋರಾಟ ಮುಂದುವರೆಯುತ್ತದೆ. ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ  ಎಂದು ಹೇಳಿದ್ದಾರೆ.

ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ದೆಹಲಿ ನಿರ್ಭಯಾ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿ 3 ವರ್ಷ ಶಿಕ್ಷೆ ಅನುಭವಿಸಿದ್ದ ಬಾಲಾಪರಾಧಿಯನ್ನು ನ್ಯಾಯಾಲಯ ನಿನ್ನೆ ಬಿಡುಗಡೆ ಮಾಡಿತ್ತು. ಇದನ್ನು ವಿರೋಧಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು. ಬಾಲಾಪರಾಧಿಯನ್ನು ಬಿಡುಗಡೆ ಮಾಡದಂತೆ ಕೋರಿ ದೆಹಲಿ ಮಹಿಳಾ ಆಯೋಗ ಸುಪ್ರೀಂಕೋರ್ಟ್ ಗೆ ತುರ್ತು ಅರ್ಜಿ ಸಲ್ಲಿಸಿತ್ತು. ಭಾನುವಾರ ರಾತ್ರಿ 2ಗಂಟೆಗೆ  ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಬಿಡುಗಡೆಗೆ ತಡೆ ನೀಡಲು ನಿರಾಕರಿಸಿ, ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು. ಇದೀಗ ವಿಚಾರಣೆ ನಡೆಸಿರುವ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ.

SCROLL FOR NEXT