ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಬೇಕಾಗಿದೆ ಎಂದು ಸಿಪಿಎಂನ ಮಾಜಿ ನೇತಾರ ಸೋಮನಾಥ ಚಟರ್ಜಿ ಹೇಳಿದ್ದಾರೆ. ಬಂಗಾಳದಲ್ಲಿ ಸಿಪಿಎಂಗೆ ಒಬ್ಬಂಟಿಯಾಗಿ ನೆಲೆ ನಿಲ್ಲುವ ಪರಿಸ್ಥಿತಿ ಇಲ್ಲ. ಹಾಗಾಗಿ ಒಬ್ಬಂಟಿಯಾಗಿ ಸ್ಪರ್ಧಿಸಿದರೆ ಸಿಪಿಎಂ ಎರಡನೇ ಅಥವಾ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿ ಬರುತ್ತದೆ. ಸಿಪಿಎಂ ಹೀಗೆ ಕುಸಿಯುತ್ತಿರುವುದನ್ನು ನೋಡಲು ನನಗೆ ಇಷ್ಟವಿಲ್ಲ. ಆದ್ದರಿಂದಲೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವಿರುದ್ಧವಿರುವ ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳೊಂದಿಗೆ ಸಿಪಿಎಂ ಮೈತ್ರಿ ಮಾಡಿಕೊಳ್ಳುವುದೊಳಿತು ಎಂದು ಚಟರ್ಜಿ ಹೇಳಿದ್ದಾರೆ.
ಅದೇ ವೇಳೆ ಸಿಪಿಎಂನ ಹಳೆಯ ನೇತೃತ್ವದ ಬಗ್ಗೆಯೂ ಚಟರ್ಜಿ ವಿಮರ್ಶಿಸಿದ್ದಾರೆ. ಬಂಗಾಳದಲ್ಲಿ ಸಿಪಿಎಂಗೆ ಹೊಡೆತವುಂಟಾಗುತ್ತದೆ ಎಂದು ಮುನ್ನೆಚ್ಚರಿಕೆ ನೀಡಿದ್ದರೂ, ಅದನ್ನು ಗಮನಿಸದೇ ಇದ್ದದ್ದು ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಇದೀಗ ಸಿಪಿಎಂನ ಹೊಸ ನೇತೃತ್ವ ಹಾಗೂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಬಗ್ಗೆ ಭರವಸೆ ಇದೆ. ಅವರಿಂದ ಬದಲಾವಣೆ ಸಾಧ್ಯ ಎಂಬ ವಿಶ್ವಾಸ ನನಗಿದೆ. ಆದರೆ ಅವರಿಗೆ ಪಾಲಿಟ್ ಬ್ಯೂರೋದಲ್ಲಿ ಬಹುಮತವಿದೆಯೇ ಎಂಬ ಸಂದೇಹವಿದೆ ಎಂದು ಚಟರ್ಜಿ ಹೇಳಿದ್ದಾರೆ.