ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆಯಲು ಹೈದರಾಬಾದ್ನ ಸಿಬಿಐ ನ್ಯಾಯಾಧೀಶರಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಜಿ. ಜನಾರ್ದನ ರೆಡ್ಡಿ ಅವರ ಜಾಮೀನಿಗಾಗಿ ಹೈದರಾಬಾದ್ ಸಿಬಿಐ ನ್ಯಾಯಾಧೀಶರಿಗೆ ಲಂಚ ನೀಡಿದ ಆರೋಪಕ್ಕೆ ಒಳಗಾಗಿರುವ ಜನಾರ್ದನ ರೆಡ್ಡಿ ಅವರನ್ನು ಕಟುವಾಗಿ ಟೀಕಿಸಿರುವ ಸುಪ್ರೀಂ ಕೋರ್ಟ್, ನ್ಯಾಯಾಂಗವನ್ನು ಹಣದ ಆಮಿಷಕ್ಕೆ ಒಳಪಡಿಸುವ ಯಾವುದೇ ಪ್ರಯತ್ನಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದೆ.
ಜನಾರ್ದನರೆಡ್ಡಿ ಅವರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆಯಲು ಲಂಚ ನೀಡಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ. ಟಿ.ಎಸ್. ಠಾಕೂರ್ ಮತ್ತು ನ್ಯಾಯಧೀಶ ಆರ್.ಎಫ್. ನಾರಿಮನ್ ಅವರನ್ನೊಳಗೊಂಡ ನ್ಯಾಯಾಪೀಠ ಕಡೇ ಪಕ್ಷ ನ್ಯಾಯಾಂಗವಾದರೂ ಭ್ರಷ್ಟಾಚಾರ ಮುಕ್ತವಾಗಿ ಉಳಿಯದಿದ್ದರೆ ಹೇಗೆ? ಎಂದು ಕೇಳಿದೆ.
ನ್ಯಾಯಾಧೀಶರಿಗೇ ಲಂಚ ಕೊಡುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನೇ ತಲೆ ಕೆಳಗೆ ಮಾಡುವ ಕೆಲಸ ಮಾಡಿದ್ದೀರಿ. ನ್ಯಾಯಾಂಗವನ್ನು ಭ್ರಷ್ಟಗೊಳಿಸುವಂಥ ಪ್ರಯತ್ನಗಳನ್ನು ಸಹಿಸುವುದಿಲ್ಲ. ಕನಿಷ್ಠ ಪಕ್ಷ ನ್ಯಾಯಾಂಗವಾದರೂ ಪ್ರಾಮಾಣಿಕವಾಗಿ ಉಳಿಯಬೇಕು ಎಂದು ನ್ಯಾಯಾಪೀಠ ತಿಳಿಸಿದೆ.
ಸಾಕಷ್ಟು ಹಣ ಹೊಂದಿರುವ ನೀವು ನ್ಯಾಯಾಧೀಶರಿಗೂ ಆಮಿಷಒಡ್ಡುತ್ತಿದ್ದೀರಿ ಎಂದು ರೆಡ್ಡಿ ಪರ ಹಿರಿಯ ವಕೀಲ ಪಿ. ವಿಶ್ವನಾಥ ಶೆಟ್ಟಿ ಅವರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಈ ಪ್ರಕರಣ ನಡೆದಾಗ ತಮ್ಮ ಕಕ್ಷಿಗಾರ ಜೈಲಿನಲ್ಲಿ ಇದ್ದುದಾಗಿ ವಿಶ್ವನಾಥ ಶೆಟ್ಟಿ ವಾದಿಸಿದರು. ಅದಕ್ಕೆ ನ್ಯಾಯಾಲಯ ನೀವು ಜೈಲಿನಿಂದ ಹೊರಗೆ ಬರಲು ಹಣ ನೀಡಿದ್ದೀರಿ ಎಂದು ಖಾರವಾಗಿ ತಿರುಗೇಟು ನೀಡಿತು.
ಅಕ್ರಮ ಗಣಿಗಾರಿಕೆ ಹಾಗೂ ಲಂಚ ಪ್ರಕರಣವನ್ನು ವಿಲೀನಗೊಳಿಸಬೇಕು ಎಂದು ಮನವಿ ಮಾಡಿ ರೆಡ್ಡಿ ಸಲ್ಲಿಸಿರುವ ಅರ್ಜಿ ಸಂಬಂಧ ಕೋರ್ಟ್, ತೆಲಂಗಾಣ ಹಾಗೂ ಸಿಬಿಐಗೆ ನೋಟಿಸ್ ಜಾರಿ ಮಾಡಿತು.
ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಸಿಬಿಐ ನ್ಯಾಯಾಧೀಶ ಪಟ್ಟಭಿರಾಮರಾವ್ ಅವರಿಗೆ ಲಂಚ ನೀಡಿದ ಆರೋಪಕ್ಕೆ ರೆಡ್ಡಿ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಧೀಶರನ್ನು ಸಸ್ಪೆಂಡ್ ಮಾಡಲಾಗಿದೆ.