ಪಟನಾ: ವಿಶ್ವಾಸಮತ ಯಾಚನೆ ವೇಳೆ ಜಿತನ್ ರಾಮ್ ರನ್ನು ಬೆಂಬಲಿಸುವ ನಿರ್ಧಾರವನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಮಹಾದಲಿತರೊಬ್ಬರಿಗೆ ಮಾಡಿದ ಅವಮಾನಕ್ಕೆ ಕಠಿಣ ಸಂದೇಶ ರವಾನಿಸಬೇಕೆಂಬುದು ನಮ್ಮ ಉದ್ದೇಶವಾಗಿತ್ತು.
ಅದಕ್ಕಾಗಿ ನಾವು ಮಾಂಝಿ ಬೆಂಬಲಿಸುವ ತೀರ್ಮಾನ ತೆಗೆದುಕೊಂಡೆವು ಎಂದು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ. ನಿತೀಶ್ ರಾಜಿನಾಮೆ ನೀಡಿರಬಹುದು. ಆದರೆ, ಅವರು ಗೆದ್ದಿದ್ದಾರೆ. ಇಡೀ ಪ್ರಸಂಗ ನಿತೀಶ್ ಕುಮಾರ್ ಅವರು ಏನೆಂಬುದನ್ನು ಬಹಿರಂಗಪಡಿಸಿದೆ. ಮಾಂಝಿ ಅವರನ್ನು ಸಿಎಂ ಮಾಡಿದ್ದೇ ನಿತೀಶ್. ಈಗ ಅವರೇ ಸಿಎಂ ಆಗ ಹೊರಟಿದ್ದಾರೆ ಎಂದು ಸುಶೀಲ್ ದೂರಿದ್ದಾರೆ.
ನಿತೀಶ್ ಕಿಡಿ
ಸುಶೀಲ್ ಆರೋಪಕ್ಕೆ ನಿತೀಶ್ ತೀವ್ರ ಕಿಡಿಕಾರಿದ್ದಾರೆ. ಬಿಜೆಪಿಯವರು ಪ್ರಜಾ ಪ್ರಭುತ್ವದ ಜತೆಗೆ ಕ್ರೂರ ಅಣಕ ಮಾಡಿದ್ದಾರೆ. ರೇಸ್ ಗೆ ಮೊದಲೇ ಕುದುರೆ(ಮಾಂಝಿ) ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿತು. ಮಾಂಝಿ ಶುಕ್ರವಾರ ಬಜೆಟ್ ಅಧಿವೇಶನ ಕರೆದಿದ್ದರು.
ಆದರೆ, ಅವರು ಸದನವನ್ನು ಎದುರಿಸದೇ ಓಡಿಹೋಗಿದ್ದಾರೆ. ಇದೇ ವೇಳೆ ತಮಗೆ ಬೆಂಬಲ ನೀಡಿದಕ್ಕಾಗಿ ಶಿವಸೇನೆ, ಮಮತಾರಿಗೂ ನಿತೀಶ್ ಕುಮಾರ್ ಈ ವೇಳೆ ಧನ್ಯವಾದ ಸಲ್ಲಿಸಿದ್ದಾರೆ. ಸಿಎಂಗೆ ಗೌರವವೇ ಸಿಗಲಿಲ್ಲ: ವಿಶ್ವಾಸಮತಕ್ಕಾಗಿ ವಿಧಾನಸಭೆಯಲ್ಲಿ ಮಾಡಿದ್ದ ಆಸನ ವ್ಯವಸ್ಥೆ ಸರಿಯಾಗಿರಲಿಲ್ಲ. ಈ ಹಿಂದಿನ ಸಂಪ್ರದಾಯ ಪಾಲಿಸಲಾಗಿಲ್ಲ. ಮುಖ್ಯಸಚೇತಕರ ನೇಮಕವನ್ನೇ ಮಾಡಲಾಗಿಲ್ಲ. ಸಿಎಂಗೆ ಮುಖ್ಯಸಚೇತಕರನ್ನು ಆಯ್ಕೆ ಹಕ್ಕಿರುತ್ತದೆ. ಆದರೆ, ಹಕ್ಕನ್ನು ಗೌರವಿಸಲೇ ಇಲ್ಲ ಎಂದು ಮಾಂಝಿ ಆರೋಪಿಸಿದ್ದಾರೆ.
ದಿನದ ಬೆಳವಣಿಗೆ ಮಾಂಝಿಗೆ ಗುರುವಾರ ರಾತ್ರಿಯೇ ಬಿಜೆಪಿ ಬೆಂಬಲ ಘೋಷಿಸಿತ್ತು. ಹೀಗಾಗಿ ಶುಕ್ರವಾರ ವಿಧಾನಸಭೆಯಲ್ಲಿ ನಡೆಯಲಿದ್ದ `ಶಕ್ತಿ ಪ್ರದರ್ಶನ' ಸಾಕಷ್ಟು ಕುತೂಹಲ ಮೂಡಿಸಿತ್ತು.