ದೇಶ

ರೈಲು ವಿಳಂಬ; ಮುಂಬೈ ರೈಲ್ವೇ ನಿಲ್ದಾಣದಲ್ಲಿ ಕಲ್ಲುತೂರಾಟ

Srinivasamurthy VN

ಮುಂಬೈ: ರೈಲು ವಿಳಂಬವಾಗಿದ್ದರ ವಿರುದ್ಧ ಆಕ್ರೋಶಗೊಂಡ ಪ್ರಯಾಣಿಕರು ರೈಲ್ವೇ ಹಳಿಗಳ ಮೇಲೆ ಇಳಿದು ರೈಲು ಅಧಿಕಾರಿಗಳ ಮೇಲೆ ಕಲ್ಲುತೂರಾಟ ಮಾಡಿದ್ದಾರೆ.

ಮುಂಬೈನ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ನಿಲ್ದಾಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇಂದು ಬೆಳಗ್ಗೆಯೇ ಹೊರಡಬೇಕಿದ್ದ ರೈಲು ತಾಂತ್ರಿಕ ದೋಷದಿಂದ 11ಗಂಟೆಯಾದರೂ ನಿಲ್ದಾಣ ಬಿಟ್ಟಿರಲಿಲ್ಲ. ಇದರಿಂದ ತೀವ್ರ ಆಕ್ರೋಶಗೊಂಡ ಪ್ರಯಾಣಿಕರು ರೈಲು ಹಳಿಗಳ ಮೇಲೆ ಇಳಿದು ಅಧಿಕಾರಿಗಳತ್ತ ಕಲ್ಲು ತೂರಾಟ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ನಿಲ್ದಾಣದ ಆವರಣದಲ್ಲಿ ನಿಲ್ಲಿಸಲಾಗಿದ್ದು 2 ಕಾರು ಮತ್ತು 1 ಬೈಕಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕಾಗಮಿಸಿರುವ ರೈಲ್ವೇ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಇಂದು ಬೆಳಗ್ಗೆ ಎಲೆಕ್ಟ್ರೋ ಲೋಕೋ ರೈಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವೈರ್ ತುಂಡಾಗಿದ್ದು, ದುರಸ್ತಿ ಕಾರ್ಯ ನಡೆದಿದೆ. ಆದರೆ ನಿಗದಿತ ವೇಳಾಪಟ್ಟಿಯಂತೆ ಬೆಳಗ್ಗೆಯೇ ಹೊರಡ ಬೇಕಿದ್ದ ರೈಲುಗಳು ಮಧ್ಯಾಹ್ನವಾದರೂ ಹೊರಡದೇ ಇದ್ದುದರಿಂದ ಆಕ್ರೋಶಭರಿತರಾದ ಪ್ರಯಾಣಿಕರು ಕಲ್ಲುತೂರಾಟ ನಡೆಸಿದ್ದಾರೆ.

ಇನ್ನು ಪ್ರಯಾಣಿಕರ ಕಲ್ಲು ತೂರಾಟವನ್ನು ಖಂಡಿಸಿ ಮೋಟರ್‌ಮೆನ್‌ಗಳು ಕೂಡ ಪ್ರತಿಭಟನೆ ನಡೆಸುತ್ತಿದ್ದು, ಇದು ಕೂಡ ಸಮಸ್ಯೆ ಬಿಗಡಾಯಿವಂತೆ ಮಾಡಿದೆ. ಪ್ರಸ್ತುತ ರೈಲ್ವೇ ಅಧಿಕಾರಿಗಳು ಮೋಟರ್‌ಮೆನ್‌ಗಳನ್ನು ಓಲೈಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಗೃ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ.

SCROLL FOR NEXT