ಮುಂಬೈ: ಸಂಶೋಧನೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ದೇಶದ ಎಲ್ಲ ಪ್ರಜೆಗಳಿಗೂ ತಲುಪುವಂತೆ ಮಾಡುವುದು ಅಷ್ಟೇ ಮುಖ್ಯ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಇಂದು ಮುಂಬೈನಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ ನ 102 ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ರೀತಿಯ ಅನ್ವೇಷಣೆಗಳು ನಡೆಯುತ್ತಿವೆ. ಆದರೆ ಅದರ ಅನುಕೂಲತೆಗಳು ಕೆಲ ನಿರ್ಧಿಷ್ಟ ಸಮೂಹವನ್ನು ಮಾತ್ರ ತಲುಪುತ್ತಿದ್ದು, ಎಲ್ಲಾ ರೀತಿಯ ಜನತೆಗೆ ತಲುಪುವುದರಲ್ಲಿ ವಿಫಲವಾಗುತ್ತಿದೆ.
ವಿದೇಶಗಳಲ್ಲಿ ಭಾರತದಲ್ಲಿ ಬಂಡವಾಳ ತೊಡಗಿಸುವ ಕುರಿತು ವಿದೇಶಗಳಲ್ಲಿ ಮಾತನಾಡಲು ಹೋದಾಗ ತಂತ್ರಜ್ಞಾನ ಕೂಡ ಅದರ ಭಾಗವಾಗಿರಬೇಕು. ಅಷ್ಟರ ಮಟ್ಟಿಗೆ ದೇಶದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗಬೇಕು. ಭಾರತದಲ್ಲಿ ವಾಣಿಜ್ಯ ವ್ಯವಹಾರ ಮತ್ತು ಸಂಶೋಧನಾ ಅಭಿವೃದ್ಧಿಗಳೆರಡಕ್ಕೂ ಸಮಾನ ರೀತಿಯಲ್ಲಿ ಗಮನ ಹರಿಸಬೇಕು. ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದಲ್ಲಿನ ಸಂಶೋಧಕರು ಹಾಗೂ ವಿಜ್ಞಾನಿಗಳು, ತಮ್ಮ ಕ್ಷೇತ್ರದಲ್ಲಿ ಅಭೂತಪೂರ್ವ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಇದು ಸರ್ಕಾರಕ್ಕಾಗಿ ಮಾಡಬೇಕಾಗಿಲ್ಲ ಬದಲಿಗೆ ದೇಶಕ್ಕಾಗಿ ಮತ್ತು ದೇಶದ ಅಭಿವೃದ್ಧಿಗಾಗಿ ಮಾಡಬೇಕು. ಸಂಶೋಧಕರು ಹಾಗೂ ವಿಜ್ಞಾನಿಗಳು ಕೆಲಸಗಳನ್ನು ಭಾರತವನ್ನು ಪರಿವರ್ತಿಸುವುದಕ್ಕೆ ಮಾಡಬೇಕೆ ಹೊರತು ಸರ್ಕಾರಕ್ಕಾಗಿ ಅಲ್ಲ. ಭಾರತವನ್ನು ಪರಿವರ್ತಿಸುವುದಕ್ಕಾಗಿ ನಾನು ನಿಮ್ಮ ಸಹಾಯವನ್ನು ಪಡೆದುಕೊಳ್ಳುತ್ತೇನೆ. ನಿಮಗೆ ನನಗಿಂತ ಹೆಚ್ಚು ಬೆಂಬಲ ನೀಡುವವರು ಸಿಗುವುದಿಲ್ಲ. ನಮ್ಮ ಕ್ಷೇತ್ರದಲ್ಲಿ ಯಶಸ್ವಿ ಕೆಲಸಗಳಾಗುವುದನ್ನು ಯಾವ ರೀತಿಯಲ್ಲಿ ಆಚರಿಸುತ್ತೇವೆಯೋ ಹಾಗೆಯೇ ಇತರೆ ಪ್ರದೇಶಗಳಲ್ಲಾಗುವ ಯಶಸ್ವಿ ಕಾರ್ಯಗಳನ್ನು ಪ್ರಶಂಸಿಸುವ ಮೂಲಕ ಅವರಿಗೂ ಬೆಂಬಲ ನೀಡಬೇಕು.
ನಮ್ಮ ದೇಶದ ವಿಜ್ಞಾನವನ್ನು ಇತರೆ ದೇಶಗಳಿಗಿಂತ ಹೆಚ್ಚು ವೈಶಿಷ್ಟ್ಯತೆಯಿಂದ ಕೂಡಿರಬೇಕು. ಇತರೆ ದೇಶಗಳಿಗೆ ನಮ್ಮ ದೇಶದ ಮೇಲಿರುವ ಹೆಮ್ಮೆ ಮತ್ತು ಪ್ರತಿಷ್ಠೆಯನ್ನು ಕಾಪಾಡಿಕೊಂಡು ಹೋಗುವುದರೊಂದಿಗೆ ಮತ್ತಷ್ಟು ಉತ್ತಮವಾಗಿಸುವಲ್ಲಿ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಸಂಶೋಧಕರಿಗೆ ಪ್ರಧಾನಿ ಮೋದಿಯವರು ಸಲಹೆ ನೀಡಿದ್ದಾರೆ.