ಮುಂಬೈ: ಲಂಡನ್ನಲ್ಲಿರುವ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನಿವಾಸವನ್ನು ಖರೀದಿಸುವಂತೆ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಬಿಜೆಪಿ ಶನಿವಾರ ಪತ್ರ ಬರೆದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ, ಲಂಡನ್ನಲ್ಲಿ ಅಂಬೇಡ್ಕರ್ ಅವರು ವಾಸವಿದ್ದ ಮನೆಯನ್ನು ಖರೀದಿಸಬೇಕು ಎಂದು ಒತ್ತಾಯಿಸಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ತಾವು ಪತ್ರ ಬರೆದಿರುವುದಾಗಿ ಮುಂಬೈ ಬಿಜೆಪಿ ಅಧ್ಯಕ್ಷ ಅಶಿಶ್ ಶೆಲಾರ್ ಅವರು ಹೇಳಿದ್ದಾರೆ.
ಅಂಬೇಡ್ಕರ್ ಅಭಿಮಾನಿಗಳಿಗೆ ಹಾಗೂ ಮಹಾರಾಷ್ಟ್ರ ಜನತೆಗೆ ಇದೊಂದು ಭಾವಾನಾತ್ಮಕ ವಿಚಾರವಾಗಿದ್ದು, ಕೇಂದ್ರ ಸರ್ಕಾರ ಅಂಬೇಡ್ಕರ್ ಅವರ ನಿವಾಸವನ್ನು ಖರೀದಿಸಬೇಕು ಎಂದು ಶೆಲಾರ್ ಒತ್ತಾಯಿಸಿದ್ದಾರೆ.
ಲಂಡನ್ನಲ್ಲಿ ಅಂಬೇಡ್ಕರ್ ಅವರ 2050 ಸ್ಕೈರ್ ಪೀಟ್ನ ಮೂರು ಅಂತಸ್ತಿನ ಮನೆ ಮಾರಾಟಕ್ಕಿದ್ದು, ಭಾರತ ಸರ್ಕಾರವೇ ಕೊಂಡುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಬಗ್ಗೆ ಭಾರತ ಸರ್ಕಾರ ಆಸಕ್ತಿಯೇ ತೋರಿಲ್ಲ. ಇದರಿಂದ ಸಂಸ್ಥೆ ಬೇಸತ್ತು ಬೇರೆ ಗ್ರಾಹಕರನ್ನು ಹುಡುಕುತ್ತಿರುವುದಾಗಿ ಏಜೆಂಟ್‘ಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಂಬೇಡ್ಕರ್ ಅವರ ಲಂಡನ್ ಮನೆಯನ್ನು ಕೊಳ್ಳಲು ತಮ್ಮ ಸರ್ಕಾರ ಹೊಸ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ಹೇಳಿದ್ದರು. ಆದರೆ, ಇದನ್ನು ಮನೆ ಮಾರಾಟ ಮಾಡುತ್ತಿರುವ ಸಂಸ್ಥೆ ತಳ್ಳಿ ಹಾಕಿದೆ. ಮನೆಯನ್ನು ಕೊಳ್ಳಲು ಭಾರತದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದ್ದಾರೆ.