ದೇಶ

ಉತ್ತರ ಭಾರತದಲ್ಲಿ ಧಾರಾಕಾರ ಮಳೆ: ಚಾರ್ ಧಾಮ್ ಯಾತ್ರಿಗಳ ಪರದಾಟ

Shilpa D

ನವದೆಹಲಿ: ಕಳೆದ ಎರಡು ದಿನಗಳಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿನ ಹಲವು ನದಿಗಳು ತುಂಬಿ, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.ಪ್ರವಾಹದ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಅಲ್ಲಲ್ಲಿ ಭೂಕುಸಿತದ ವರದಿಗಳಾಗಿದ್ದು. ಇದುವರೆಗೂ ಮಳೆ ನಿಂತಿರುವ ವರದಿಯಾಗಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತಾರಖಂಡದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಾರ್ ಧಾಮ್ ಗಳಾದ ಕೇದಾರನಾಥ, ಬದರಿನಾಥ, ಗಂಗೋತ್ರಿ, ಯಮುನೋತ್ರಿ, ಹೇಮ್ ಕುಂಡ್ ಸಾಹೀಬ್ ಯಾತ್ರೆ ಸ್ಥಗಿತಗೊಂಡಿದೆ. ಯಾತ್ರಾತ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಹೆಲಿಕಾಪ್ಟರ್ ನಲ್ಲಿ ಸ್ಥಳಾಂತರಿಸಲಾಗಿದೆ.

ಇನ್ನು ದೆಹಲಿಯಲ್ಲಿ ಭಾರೀ ಪ್ರಮಾಣ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಾತ್ರಿಯಿಡಿ ಸುಮಾರು 90 ಮಿಲಿಮೀಟರ್ ಮಳೆಯಾಗಿರುವ ವರದಿಯಾಗಿದೆ. ಇನ್ನು ಮಳೆಯಿಂದಾಗಿ ಉಂಟಾದ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಇಂದು ಕೂಡ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಡಿಸಾ, ಪಂಜಾಬ್,ಹರ್ಯಾಣ ಹಾಗೂ ರಾಜಸ್ತಾನಗಳಲ್ಲೂ ಭಾರಿ ಮಳೆಯಾಗಿರುವ ವರದಿಯಾಗಿದೆ.

SCROLL FOR NEXT