ಪಾಂಡಿಚೇರಿ: ಅಂತರಾಷ್ಟ್ರೀಯ ಯೋಗದಿನಾಚರಣೆಯಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದರೆಂದು ಮೋದಿ ವಿರುದ್ಧ ಪ್ರಕರಣವೊಂದು ಸೋಮವಾರ ದಾಖಲಾಗಿದೆ.
ದಲಿತ ಸೇನೆಯ ಕಾರ್ಯದರ್ಶಿಯಾಗಿರುವ ವಿ. ಸುಂದರ್ ಪ್ರಧಾನಿ ಮೋದಿ ವಿರುದ್ಧ ಪ್ರಕರಣ ದಾಖಲಿಸಿದ್ದು, ದೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ದಿನದಂದು ರಾಷ್ಟ್ರಧ್ವಜದಲ್ಲಿ ಮುಖ ಒರೆಸಿಕೊಳ್ಳುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಹೇಳಿದ್ದಾರೆ.
ಮೋದಿ ರಾಷ್ಟ್ರಧ್ವಜ ಅವಮಾನ ಕುರಿತಂತೆ ವಾಟ್ಸ್ ಅಪ್ ಮೂಲಕ ಮಾಹಿತಿ ದೊರೆಯಿತು. ಹೀಗಾಗಿ ಯೋಗದಿನದಂದೇ 3 ಗಂಟೆ ಸುಮಾರಿಗೆ ಪಾಂಡಿಚೇರಿಯ ಒರ್ಲಿನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಲಾಯಿತು. ಆದರೆ, ಪ್ರಾರಂಭದಲ್ಲಿ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದರು. ನಂತರ ಇನ್ಸ್ ಪೆಕ್ಟರ್ ವೀರವಲ್ಲಭನ್ ದೂರು ಸ್ವೀಕರಿಸಿ ದೂರು ಅಂಗೀಕಾರ ಸ್ವೀಕೃತ ರಸೀದಿಯನ್ನು ನೀಡಿದರು ಎಂದು ಪ್ರಧಾನಿ ವಿರುದ್ಧ ದೂರು ನೀಡಿರುವ ದಲಿತ ಸೇನೆಯ ಕಾರ್ಯದರ್ಶಿ ವಿ.ಸುಂದರ್ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಈಗಾಗಲೇ ದಾಖಲಾಗಿರುವ ದೂರಿನ ಅನ್ವಯ ತನಿಖೆ ನಡೆಸಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿ.ಜೆ.ಚಂದ್ರನ್ ಹೇಳಿದ್ದಾರೆ.