ದೇಶ

ತುರ್ತು ಪರಿಸ್ಥಿತಿ: ಸಂಜಯ್ ಗಾಂಧಿ ಓಲೈಕೆಗಾಗಿ ಸಿಎಂಗಳಿಂದ ಬೃಹತ್ ಸಂತಾನಹರಣ ಚಿಕಿತ್ಸೆ

Srinivas Rao BV

ನವದೆಹಲಿ: ದೇಶದ ಮೇಲೆ ವಿಧಿಸಿದ್ದ ತುರ್ತು ಪರಿಸ್ಥಿತಿಗೆ ಇಂದಿಗೆ 40 ವರ್ಷ. 4 ದಶಕದ ಹಿಂದೆ ಜಾರಿಯಲ್ಲಿ ಕರಾಳ ಸ್ಥಿತಿಯಲ್ಲಿ ನಡೆದಿದ್ದ ಘಟನೆಗಳನ್ನು ದೇಶಾದ್ಯಂತ ಮೆಲುಕು ಹಾಕಲಾಗುತ್ತಿದ್ದು ಈ ವರೆಗೂ ತಿಳಿದಿರದ ಸತ್ಯಗಳು ಬಹಿರಂಗವಾಗತೊಡಗಿದೆ.

ತುರ್ತು ಪರಿಸ್ಥಿಯಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿದ್ದ ಸಂಜಯ್ ಗಾಂಧಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಲು ಅಂದಿನ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಆದೇಶ ನೀಡುತ್ತಿದ್ದರು  ಎಂಬ ಅಂಶ ಬಯಲಾಗಿದೆ.

ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದಯುತ ಸಂಬಂಧ ಮುಂದುವರೆಸುವುದಕ್ಕಾಗಿ, ದೇಶದ ರಾಜಧಾನಿಯಲ್ಲಿ ಸಂಜಯ್ ಗಾಂಧಿ ಮುಂದಾಳುತ್ವದಲ್ಲಿ ನಡೆದ ಸಂತಾನ ಶಕ್ತಿ ಹರಣ ಶಸ್ತ್ರಚಕಿತ್ಸೆಗೆ ತಾವೂ ಬೆಂಬಲ ವ್ಯಕ್ತಪಡಿಸಿ ತಮ್ಮ ರಾಜ್ಯಗಳಲ್ಲಿ ಸಂಜಯ್ ಗಾಂಧಿ ಮಾದರಿಯಲ್ಲೇ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸುತ್ತಿದ್ದರು ಎಂದು ಷಾ ಸಮಿತಿಗೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಆರೋಗ್ಯ ಸಚಿವ ಕರಣ್ ಸಿಂಗ್ ಹೇಳಿರುವುದು ದಾಖಲಾಗಿದ್ದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.  ತುರ್ತು ಪರಿಸ್ಥಿತಿಯಲ್ಲಿ ನಡೆದಿದ್ದ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಲು 1977 ರಲ್ಲಿ ಸುಪ್ರೀಂ ಕೋರ್ಟ್ ನ್ಯಾ ಜೆ.ಸಿ ಷಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

ತುರ್ತು ಪರಿಸ್ಥಿತಿ ವೇಳೆ, ಸಂತಾನ ಹರಣ ಶಸ್ತ್ರಚಿಕಿತ್ಸೆ ಮೂಲಕ ನಿರ್ದಯವಾಗಿ ಕುಟುಂಬ ಯೋಜನಾ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿತ್ತು. ದೇಶದ ಭವಿಷ್ಯಕ್ಕಾಗಿ ಕೆಲವು ರಾಜ್ಯಗಳಲ್ಲಿ ಇದು ಗಂಭೀರ ಪರಿಣಾಮಗಳನ್ನುಂಟು ಮಾಡಿತ್ತು ಎಂದು ಕರಣ್ ಹೇಳಿದ್ದಾರೆ.

ರಾಜಸ್ಥಾವ ಅಥವಾ ಹರ್ಯಾಣದಲ್ಲಿ, ಬಸ್ ನಲ್ಲಿ ಸಂಚರಿಸುತ್ತಿದ್ದ ಜನರನ್ನು ಒಟ್ಟಿಗೆ ಸಂತಾನಶಕ್ತಿ ಹರಣ ಶಿಬಿರಗಳಿಗೆ ಕರೆದೊಯ್ಯಲಾಗುತ್ತಿತ್ತು ಎಂದು ತಮ್ಮ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದರು ಈ ಬಗ್ಗೆ ಅಲ್ಲಿನ ಸಚಿವರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಕರಣ್ ತಿಳಿಸಿದ್ದಾರೆ.

ಎಷ್ಟೊ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗದೇ ಇದ್ದಲ್ಲಿ, ಆತನಿಗೆ ಸಂಬಳವನ್ನು ತಡೆಹಿಡಿಯಲಾಗುತ್ತಿತ್ತು ಅಂತಹ ಕರಾಳ ದಿನಗಳು ತುರ್ತುಪರಿಸ್ಥಿತಿಯಲ್ಲಿದ್ದವು ಎಂದು ಕರಣ್ ಷಾ ಸಮಿತಿ ಎದುರು ಹೇಳಿಕೆ ನೀಡಿದ್ದರು. ತುರ್ತು ಪರಿಸ್ಥಿತಿಯಲ್ಲಿ ನಡೆಸಿದ್ದ ಒತ್ತಾಯಪೂರ್ವಕ ಸಂತಾನ ಹರಣ ಶಸ್ತ್ರಚಿಕಿತ್ಸೆಯಿಂದಾಗಿ 1 ,642 ಸಾವು ಸಂಭವಿಸಿದ್ದವು.  

ಕೆಲವೊಂದು ರಾಜ್ಯಗಳು ಈ ಯೋಜನೆಯ ನೇತೃತ್ವ ವಹಿಸಿದ್ದ ಸಂಜಯ್ ಗಾಂಧಿ ಅವರನ್ನು ಓಲೈಸಲು ತಮ್ಮ ಗುರಿಯನ್ನು ಶೇ.400 ಕ್ಕೆ ಏರಿಸಿತ್ತು ಎಂದು ಷಾ ಸಮಿತಿಗೆ ಕರಣ್ ಆಘಾತಕಾರಿ ಅಂಕಿ ಅಂಶ ನೀಡಿದ್ದರು.

SCROLL FOR NEXT