ದೇಶ

ಲೋಕಸಭೆಯಲ್ಲೂ ಗದ್ದಲ

ನವದೆಹಲಿ: ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಡಿ.ಕೆ.ರವಿ ಅಸಹಜ ಸಾವಿನ ವಿಷಯ ಪ್ರಸ್ತಾಪಿಸಿದ ಬಿಜೆಪಿ ಪ್ರಹ್ಲಾದ ಜೋಶಿ, ಪ್ರಕರಣದ ಸಿಬಿಐ ತನಿಖೆ ನಡೆಸುವಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ದೂರಿದರು.

ಅದನ್ನು ಕಾಂಗ್ರೆಸ್ ಸದಸ್ಯರು ಏರಿದ ದನಿಯಲ್ಲಿ ಆಕ್ಷೇಪಿಸಿದರು. `ಇದು ಅತ್ಯಂತ ಗಂಭೀರ ವಿಷಯ, ಸುಮ್ಮನೆ ಆಲಿಸಿ'ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಸೂಚಿಸಿದರು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮುಂದುವರೆಸಿದರು.  ಅದರ ನಡುವೆಯೇ ಮಾತನಾಡಿದ ಜೋಶಿ, ರವಿ ಸಾವಿನ ಮಾರನೆ ದಿನ ಕೋಲಾರ ಸಂಪೂರ್ಣ ಬಂದ್ ಆಗಿದೆ.

ತುಮಕೂರಿನಲ್ಲಿ ಪೊಲೀಸರು ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ರಾಜ್ಯದೆಲ್ಲೆಡೆ ಪ್ರತಿಭಟನೆ ಹಬ್ಬಿದೆ. ಮೃತ ಅಧಿಕಾರಿ ತಂದೆ, ತಾಯಿ, ಸಹೋದರ, ಮಾವ ಸೇರಿದಂತೆ ಎಲ್ಲರೂ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಆದರೂ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಪ್ರಕರಣದಲ್ಲಿ ಯಾರ ವಿರುದ್ಧವಾಗಿ ಎಲ್ಲರೂ ಬೆಟ್ಟು ತೋರುತ್ತಿದ್ದಾರೋ ಅವರ (ಗೃಹ ಸಚಿವರ) ಅಧೀನದಲ್ಲಿ ಸಿಐಡಿ ಕೆಲಸ ಮಾಡುವುದರಿಂದ ನಿಷ್ಪಷ್ಟಪಾತ ಮತ್ತು ನ್ಯಾಯಸಮ್ಮತ ತನಿಖೆ ಅಸಾಧ್ಯ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಮತ್ತಷ್ಟು ಏರುದನಿಯಲ್ಲಿ ವಿರೋಧ ವ್ಯಕ್ತಪಡಿಸಿದರು. ಆಗ ಮತ್ತಷ್ಟು ಗದ್ದಲ ಏರ್ಪಟ್ಟಿತು. ಅದರ ನಡುವೆಯೇ ಎದ್ದು ನಿಂತ ಗೃಹ ಸಚಿವ ರಾಜನಾಥಸಿಂಗ್, ಕರ್ನಾಟಕ ಸರ್ಕಾರ ಕೋರಿದರೆ ಮಾತ್ರ ಸಿಬಿಐ ತನಿಖೆಗೆ ಒಪ್ಪಿಸುವುದಾಗಿ ತಿಳಿಸಿದರು. ಐಎಎಸ್ ವಿದ್ಯಾರ್ಥಿಗಳ ಪ್ರತಿಭಟನೆ: ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ನವದೆಹಲಿಯ ಹಳೆ ರಾಜೇಂದ್ರ ನಗರದಲ್ಲಿ ಯುಪಿಎಸ್ಸಿ ವಿದ್ಯಾರ್ಥಿಗಳು ಗುರುವಾರ
ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೂ ಪಾಲ್ಗೊಂಡಿದ್ದರು. ರಾಜೇಂದ್ರನಗರ ಪ್ರದೇಶದಲ್ಲಿ ಐಎಎಸ್ ತರಬೇತಿ ನೀಡುವ ಹತ್ತಾರು ಖಾಸಗಿ ಕೇಂದ್ರಗಳಿವೆ.

SCROLL FOR NEXT