ದೇಶ

ಸ್ವದೇಶಕ್ಕೆ ಮರಳುವಂತೆ ವಿದೇಶಿ ರಕ್ಷಣಾ ತಂಡಗಳಿಗೆ ನೇಪಾಳ ಒತ್ತಾಯ

Lingaraj Badiger

ಕಠ್ಮಂಡು: ಭೀಕರ ಭೂಕಂಪಕ್ಕೆ ಸಾಕ್ಷಿಯಾಗಿದ್ದ ನೇಪಾಳದಲ್ಲಿ ರಕ್ಷಣಾ ಕಾರ್ಯ ಬಹುತೇಕ ಅಂತ್ಯವಾಗಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ನೂರಾರು ವಿದೇಶಿಗರಿಗೆ ತಮ್ಮ ತಮ್ಮ ದೇಶಕ್ಕೆ ಮರಳುವಂತೆ ನೇಪಾಳ ಸರ್ಕಾರ ಸೋಮವಾರ ಒತ್ತಾಯಿಸಿದೆ.

ಕಠ್ಮಂಡು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿನ ದೊಡ್ಡ ಮಟ್ಟದ ರಕ್ಷಣಾ ಕಾರ್ಯ ಬಹುತೇಕ ಅಂತ್ಯಗೊಂಡಿದ್ದು, ಇತರೆ ಪ್ರದೇಶದಲ್ಲಿನ ಸಣ್ಣಪುಟ್ಟ ರಕ್ಷಣಾ ಕಾರ್ಯಯವನ್ನು ಸ್ಥಳೀಯ ಕಾರ್ಯಕರ್ತರ ನೆರವಿನೊಂದಿಗೆ ನಡೆಸಲಾಗುವುದು. ಇದಕ್ಕೆ ವಿದೇಶಿ ರಕ್ಷಣಾ ತಂಡಗಳ ಅಗತ್ಯ ಇಲ್ಲ ಎಂದು ನೇಪಾಳ ಮಾಹಿತಿ ಸಚಿವ ಮಿನೇಂದ್ರ ರಿಜಲ್ ಅವರು ಹೇಳಿದ್ದಾರೆ.

ಕಳೆದ ಏಪ್ರಿಲ್ 25ರಿಂದ ಭಾರತ, ಜಪಾನ್, ಚೀನಾ ಸೇರಿದಂತೆ ಹಲವು ದೇಶಗಳ ರಕ್ಷಣಾ  ಕಾರ್ಯದಲ್ಲಿ ತೊಡಗಿದ್ದವು  ಆದರೆ ಇದೀಗ ಭಾರತ ಸೇರಿದಂತೆ ಎಲ್ಲಾ ವಿದೇಶಿ ರಕ್ಷಣಾ ತಂಡ ಸ್ವದೇಶಕ್ಕೆ ವಾಪಸ್ ಆಗುವಂತೆ ನೇಪಾಳ ಸರ್ಕಾರ ಒತ್ತಾಯಿಸಿದೆ.

ವಿದೇಶಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ಮಾಧ್ಯಮಗಳ ಮೂಲಕ ತಾವೇ ಹೆಚ್ಚಿನ ಪ್ರಚಾರ ಗಿಟ್ಟಿಸಿಕೊಂಡು ನೇಪಾಳವನ್ನು ಕೀಳಾಗಿ ಬಿಂಬಿಸಲಾಗುತ್ತಿದೆ ಎಂಬ ಆರೋಪ ನೇಪಾಳದ್ದು. ಭಾರತದ ರಕ್ಷಣಾ ಪಡೆ ನೇಪಾಳದಲ್ಲಿ ನಡೆಸಿದ ಕಾರ್ಯಾಚರಣೆ ಶ್ಲಾಘನೆಗೆ ಕಾರಣವಾಗಿತ್ತು. ಹೀಗೆ ವಿದೇಶಿ ಪಡೆಗಳ ರಕ್ಷಣಾ ಕಾರ್ಯ ಮತ್ತು ಅವುಗಳಿಗೆ ಸಿಕ್ಕ ಪ್ರಚಾರಕ್ಕೆ ನೇಪಾಳ ಕಂಗಾಲಾಗಿ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಗಳು ತಿಳಿಸಿವೆ.

SCROLL FOR NEXT