ನವದೆಹಲಿ: ದೇಶದ ಜನತೆಗೆ `ಅಚ್ಛೇ ದಿನ್'ನ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರದ ಮೋದಿ ಸರ್ಕಾರಕ್ಕೆ ಮೇ 26ರಂದು ವರ್ಷ ತುಂಬಲಿದೆ. ಎಲ್ಲ ಸರ್ಕಾರಗಳು ಹೆಚ್ಚಾಗಿ ವರ್ಷದ ಸಂಭ್ರಮವನ್ನು ದೆಹಲಿಯಲ್ಲಿ, ಪ್ರಧಾನಿಯ ನಿವಾಸದಲ್ಲಿ ಔತಣಕೂಟ ನಡೆಸುವ ಮೂಲಕ ಆಚರಿಸಿದರೆ, ಮೋದಿ ಸರ್ಕಾರ ಮಾತ್ರ ವರ್ಷಾಚರಣೆಯನ್ನು ವಿಭಿನ್ನವಾಗಿ ನಡೆಸಲು ನಿರ್ಧರಿಸಿದೆ.
ಅದು ಹೇಗೆ ಗೊತ್ತಾ? ದೇಶದ ಮೂಲೆ ಮೂಲೆ ಗಳಿಗೆ ಸರ್ಕಾರದ ಸಾಧನೆಗಳನ್ನು ವಿವರಿಸುವ ಮೂಲಕ. ವಿಶೇಷವೆಂದರೆ, ಸಾಧನೆಗಳನ್ನು ಜನರಿಗೆ ತಲುಪಿಸುವುದು ಬೇರ್ಯಾರೂ ಅಲ್ಲ, ಸ್ವತಃ ಕೇಂದ್ರದ ಸಚಿವರೇ. ಹೌದು. ಎಲ್ಲ ಸಚಿವರೂ ತಮ್ಮ ತಮ್ಮ ಕ್ಷೇತ್ರಗಳಿಗೆ ಹಾಗೂ ದೇಶದ ಗ್ರಾಮೀಣ ಭಾಗಗಳಿಗೆ ತೆರಳಿ `ಜನಸಂಪರ್ಕ ಕಾರ್ಯಕ್ರಮ'ವನ್ನು ಏರ್ಪಡಿಸಬೇಕು. ಅಲ್ಲಿನ ಜನರಿಗೆ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು ಎಂದು ಸ್ವತಃ ಸರ್ಕಾರವೇ ಎಲ್ಲ ಸಚಿವರಿಗೂ ಸೂಚಿಸಿದೆ.
ಜತೆಗೆ, ಸರ್ಕಾರವು ಕಾಪೋರೇಟ್ ಪರವಾಗಿದೆ ಎಂಬ ಪ್ರತಿಪಕ್ಷಗಳ ಟೀಕೆಗೆ ಸರಿಯಾಗಿ ಎದುರೇಟು ನೀಡಿ, ಸರ್ಕಾರದ ಬಡವರ ಪರ, ರೈತರ ಪರ ನೀತಿಗಳನ್ನು ಬಹಿರಂಗಪಡಿಸಿ
ಎಂದೂ ಸೂಚಿಸಲಾಗಿದೆ. ಇದೇ ವೇಳೆ, ವರ್ಷಾಚರಣೆಯನ್ನು ದೆಹಲಿಯ ಹೊರಕ್ಕೂ ತೆಗೆದುಕೊಂಡು ಹೋಗಬೇಕು ಎನ್ನುವ ಆಶಯವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ.
* ವರ್ಷ ತುಂಬೋದು ಯಾವಾಗ?
ಮೇ 26ರಂದು.
* ಪ್ರಧಾನಿಯೇನು ಮಾಡುತ್ತಾರೆ?
ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆದರೆ, ಅವರು ದೇಶದ ಯಾವುದಾದರೂ ದೂರದ ಗ್ರಾಮಕ್ಕೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮತ್ತು ಅಲ್ಲೇ ಮಾಧ್ಯಮಗಳೊಂದಿಗೆ ಮಾತನಾಡುವ ಸಾಧ್ಯತೆಯಿದೆ. ಅಥವಾ ಅವರದ್ದೇ ಕ್ಷೇತ್ರವಾದ ವಾರಾಣಸಿಗೆ ತೆರಳಬಹುದು. ಪ್ರಧಾನಿಯ ಚೀನಾ ಪ್ರವಾಸದ ನಂತರ ಈ ಬಗೆಗಿನ ಅಂತಿಮ ನಿರ್ಧಾರ ಹೊರಬೀಳಲಿದೆ.
* ಮೋದಿ ಸುದ್ದಿಗೋಷ್ಠಿ ನಡೆಸ್ತಾರಾ?
ಮೇ 30ರ ವೇಳೆಗೆ ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ಸುದ್ದಿಗೋಷ್ಠಿ ಕರೆದು, ಸರ್ಕಾರದ ಯೋಜನೆಗಳು ಹಾಗೂ ಕಳೆದ ಒಂದು ವರ್ಷದಲ್ಲಿ ಬಡವರ ಬದುಕನ್ನು ಸುಧಾರಿಸಲೆಂದು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸುವ ಸಾಧ್ಯತೆಯಿದೆ. ಆದರೆ ಈ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೋ, ಇಲ್ಲವೋ ಎಂಬ ಬಗ್ಗೆ ಮಾಹಿತಿಯಿಲ್ಲ.
* ಉದ್ದೇಶವೇನು?
ಸರ್ಕಾರದ ನೀತಿಗಳು ಗ್ರಾಮೀಣ ಪ್ರದೇಶದ ಜನರ ಹಿತವನ್ನು ಕಾಪಾಡುತ್ತಿದೆ ಎಂಬುದನ್ನು ತಿಳಿಸುವುದು ಹಾಗೂ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ನಡೆಸುತ್ತಿರುವ ಕುತಂತ್ರವನ್ನು ಜನರ ಮುಂದಿಡುವುದು.