ದೇಶ

ವಿಜಯವಾಡ ರಸ್ತೆಯಲ್ಲಿ ಆಂಧ್ರ ಎಂಎಲ್ ಎ ಮಗನ ಪುಂಡಾಟ

Shilpa D

ವಿಜಯವಾಡ: ಸದಾ ಜನಜಂಗುಳಿಯಿಂದ ತುಂಬಿರುವ ರಸ್ತೆಯಲ್ಲಿ ಶಾಸಕರೊಬ್ಬರ ಪುತ್ರ ಅತಿ ವೇಗವಾಗಿ ಕಾರು ಚಲಾಯಿಸಿ ಉದ್ಧಟತನ ಮೆರೆದ ಘಟನೆ ಆಂದ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.  ಸ್ಥಳೀಯ ಶಾಸಕ ಬೊಂಡ ಉಮಾಮಹೇಶ್ವರ ರಾವ್ ಪುತ್ರ ರವಿ ತೇಜಾನ ಪುಂಡಾಟ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಭಾನುವಾರ ರಜಾ ದಿನವಾಗಿದ್ದರಿಂದ ವಿಜಯವಾಡ ರಸ್ತೆಯಲ್ಲಿ ಹೆಚ್ಚಿನ ಜನ ನೆರೆದಿದ್ದರು.  ತನ್ನ ಟಯೋಟಾ ಫಾರ್ಚೂನರ್ ಕಾರ್ ಅನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ರವಿತೇಜಾ ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿ ಡ್ರೈವಿಂಗ್ ಮಾಡಿ ಜನರಲ್ಲಿ ಭಯ ಮೂಡಿಸಿದ್ದಾನೆ. ಕಾರಿನ ಫುಟ್ ಬೋರ್ಡ್ ಮೇಲೆ ನೇತಾಡುತ್ತಿದ್ದ್ದ ಆತನ ಸ್ನೇಹಿತರು ರಸ್ತೆಯುದ್ದಕ್ಕೂ ಕೂಗಾಡಿ ಪಟಾಕಿ ಹಚ್ಚಿ ಜನರನ್ನು ಗಾಬರಿಗೊಳಿಸಿದ್ದಾರೆ. ಭಯಗೊಂಡ ಜನ ಆತನಿಗೆ ದಾರಿ ಬಿಟ್ಟಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಾಗಿದ್ದರು.
ಆತನ ಹಿಂದೆ ಮೋಟಾರ್ ಬೈಕ್ ನಲ್ಲಿ ಬರುತ್ತಿದ್ದ ಕೆಲ ಯುವಕರು ಬೈಕ್ ಮೇಲೆ ಸ್ಟಂಟ್ ಮಾಡಿ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರವಿ ತೇಜಾ ಮತ್ತವನ ಸ್ನೇಹಿತರ ಜಾಲಿ ರೈಡ್ ಸ್ಥಳೀಯ ಪತ್ರಕರ್ತರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಇನ್ನು ಈ ಸಂಬಂಧ ಶಾಸಕ ಬೊಂಡ ಉಮಾ ಮಹೇಶ್ವರ ರಾವ್ ಅವರನ್ನು ಕೇಳಿದರೆ ಇದೊಂದು ಸಣ್ಣ ವಿಷಯ. ಇದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಪೊಲೀಸರು ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಅದೊಂದು ಮುಗಿದ ಅಧ್ಯಾಯ ಎಂದು ಕೇಸ್ ಕ್ಲೋಸ್ ಮಾಡಿದ್ದಾರೆ.
ಕಳೆದ ವರ್ಷವಷ್ಟೆ ಶಾಸಕ ಬೊಂಡ ಉಮಾ ಮಹೇಶ್ವರ ರಾವ್ ಅವರ ಹಿರಿಯ ಪುತ್ರ ಆಂಧ್ರ ಪ್ರದೇಶ ರಾಷ್ಟ್ರೀಯ ಹೆದ್ದಾರಿಯಲ್ಲಿ ತುಂಬಾ ಅಪಾಯಕಾರಿಯಾದ ಮೋಟಾರ್ ಬೈಕ್  ರೇಸ್ ಮಾಡಿದ್ದ. ಆದರೆ ಈ ಸಂಬಂಧ ಯಾವುದೇ ಕೇಸು ದಾಖಲಾಗಿರಲಿಲ್ಲ.
ಬೊಂಡ ಉಮಾ ಮಹೇಶ್ವರ ರಾವ್ ಸಿಎಂ ಚಂದ್ರ ಬಾಬು ನಾಯ್ಡು ಅವರ ತೆಲುಗು ದೇಶಂ ಪಾರ್ಟಿಯ ಶಾಸಕ ರಾಗಿದ್ದಾರೆ



SCROLL FOR NEXT