ಪಟನಾ: ಬಿಹಾರದಲ್ಲಿ ಮತಗಟ್ಟೆ ಸಮೀಕ್ಷೆಗಳನ್ನು ನಂಬಿ ಕುಳಿ ತಿದ್ದ ರಾಜಕೀಯ ಪಕ್ಷಗಳ ನಾಯಕರಿಗೆ ಭಾರಿ ಆಘಾತ ಎವಾಗಿದೆ. ಮತ್ತೊಂದೆಡೆ, ಇಂಥ ಸಮೀಕ್ಷೆ
ಗಳನ್ನು ನಂಬಬಹುದೇ ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡಿದೆ. ಮಹಾಮೈತ್ರಿಕೂಟವು ಎಲ್ಲ ಮತಗಟ್ಟೆ ಸಮೀಕ್ಷೆಗಳನ್ನು ಸುಳ್ಳಾಗಿಸಿದ್ದೇ ಇದಕ್ಕೆ ಕಾರಣ. ಬಿಹಾರದಲ್ಲಿ ಎಲ್ಲ ಸಂಭಾವ್ಯತೆಗಳೂ ಇವೆ ಎಂದು ಸಮೀಕ್ಷೆಗಳು ತಿಳಿಸಿದ್ದವಾದರೂ, ಯಾವ ಸಮೀಕ್ಷೆ ಕೂಡ ಮಹಾಘಟಬಂಧನ್ಗೆ ಈ ಪರಿಯ ಜಯ ದೊರಕಬಹುದೆಂದು ಊಹಿಸಿಯೇ ಇರಲಿಲ್ಲ. ನ್ಯೂಸ್ ಎಕ್ಸ್-ಸಿಎನ್ಎಕ್ಸ್, ಎಬಿಪಿ-ನೀಲ್ಸನ್
ಮತ್ತು ನ್ಯೂಸ್ ನೇಷನ್ಗಳ ಮತಗಟ್ಟೆ ಸಮೀಕ್ಷೆಗಳು ಸಿಎಂ ನಿತೀಶ್ ಕುಮಾರ್ ಸರಳ ಬಹುಮತ ಗಳಿಸ ಬಹುದು ಎಂದಿದ್ದವು. ಟೈಮ್ಸ್ ನೌ-ಸಿ ವೋಟರ್ ಸಮೀಕ್ಷೆ ಈ ಬಾರಿ ಕೂದಲೆಳೆ ಅಂತರದಿಂದ ನಿತೀಶ್ಗೆ ಜಯವಾಗಿ ಫೋಟೋ ಫಿನಿಶ್ ಫಲಿತಾಂಶ ಬರಬಹುದೆಂದು ಹೇಳಿತ್ತು. ಇಂಡಿಯಾ ಟುಡೇ- ಸಿಸೆರೋ ಸಮೀಕ್ಷೆಯು ಬಿಜೆಪಿಗೆ ಹೆಚ್ಚು ಸ್ಥಾನ
ಬಂದು, ಅತಂತ್ರ ವಿಧಾನಸಭೆ ರಚನೆಯಾಗುವುದಾಗಿ ಭವಿಷ್ಯ ನುಡಿದಿತ್ತು. ಇನ್ನೊಂದೆಡೆ, ನ್ಯೂಸ್ 24- ಟುಡೇಸ್ ಚಾಣಕ್ಯ ಮಾತ್ರ ಎಲ್ಲ ಲೆಕ್ಕಾಚಾರಗಳನ್ನೂ
ಮೀರಿ ಎನ್ಡಿಎ ಮೈತ್ರಿಕೂಟಕ್ಕೆ ಬರೋಬ್ಬರಿ 155 ಸೀಟುಗಳು ಬರಲಿವೆ ಎಂದಿತ್ತು. ಆದರೆ, ಇದು ಸಂಪೂರ್ಣ ಸುಳ್ಳಾಯಿತು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶಕ್ಕೆ ಸಮೀಪದ ಲೆಕ್ಕಾಚಾರ ಹೊರಹಾಕಿ, ಎಲ್ಲರ ಗಮನ ಸೆಳೆದಿದ್ದ ಚಾಣಕ್ಯಗೆ ಈ ಬಾರಿ ತೀವ್ರ ಮುಖಭಂಗವಾಯಿತು. ಭಾನುವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಸಮೀಕ್ಷೆಯು ಸುಳ್ಳಾಗಿದ್ದಕ್ಕೆ ಟುಡೇಸ್ ಚಾಣಕ್ಯ ಕ್ಷಮೆ ಕೋರಿದ ಘಟನೆಯೂ ನಡೆಯಿತು.
ಸಮೀಕ್ಷೆ ಕೈಬಿಟ್ಟಿದ್ದ ಚಾನೆಲ್: `ಅತಿದೊಡ್ಡ ಮತ ಗಟ್ಟೆ ಸಮೀಕ್ಷೆ'ಯನ್ನು ಗುರುವಾರ ಪ್ರಕಟಿಸುವುದಾಗಿ ಘೋಷಿಸಿದ್ದ ಸಿಎನ್ಎನ್-ಐಬಿಎನ್ ವಾಹಿನಿಯು
ಕೊನೇ ಕ್ಷಣದಲ್ಲಿ ಸಮೀಕ್ಷೆಯ ಫಲಿತಾಂಶವನ್ನೇ ಕೈಬಿಟ್ಟಿತ್ತು. ಇಲ್ಲಿ ಅಚ್ಚರಿಯ ಸಂಗತಿಯೆಂದರೆ, ಇವರ ಸಮೀಕ್ಷೆಯ ಲೆಕ್ಕಾಚಾರ ಸರಿಯಾಗಿಯೇ ಇತ್ತು. ಆ್ಯಕ್ಸಿಸ್-ಆ್ಯಡ್-ಪ್ರಿಂಟ್-ಮೀಡಿಯಾ (ಇಂಡಿಯಾ)ಲಿ. ಸಂಸ್ಥೆಯು ಸಿಎನ್ಎನ್-ಐಬಿಎನ್ ಗಾಗಿ ಸಮೀಕ್ಷೆ ನಡೆಸಿತ್ತು. ಮಹಾಮೈತ್ರಿಗೆ 169ರಿಂದ 183, ಎನ್ಡಿಎಗೆ 58-70 ಸೀಟುಗಳು ಬರಲಿದೆ ಎಂದು ಸಮೀಕ್ಷೆ ಹೇಳಿತ್ತು. ಆದರೆ, ಇತರೆ ಸಮೀಕ್ಷೆ ಗಳಿಗೆ ಹೋಲಿಸಿದರೆ ಸಂಪೂರ್ಣ ಉಲ್ಟಾ ಫಲಿತಾಂಶ ನೀಡುವ ಈ ಸಮೀಕ್ಷೆಯನ್ನು ಒಪ್ಪಿಕೊಳ್ಳಲು ಚಾನೆಲ್ ನಿರಾಕರಿಸಿತು. ಹಾಗಾಗಿ, ಸಮೀಕ್ಷೆಯ ಫಲಿತಾಂಶ ಪ್ರಸಾರವನ್ನೇ ಕೈಬಿಟ್ಟಿತು. ಆದರೆ, ಆ್ಯಕ್ಸಿಸ್ ಮೀಡಿಯಾವು ಸಮೀಕ್ಷೆಯ ವರದಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಸಾರ ಮಾಡಿತು. ಇವರ ಲೆಕ್ಕಾಚಾರ ಪಕ್ಕಾ ಆಗಿತ್ತು ಎಂಬುದು ಗೊತ್ತಾಗಿದ್ದು ಫಲಿತಾಂಶ ಬಂದ ನಂತರವೇ!