ನವದೆಹಲಿ: ಮುಂಬೈಯ ರಾಯ್ ಗಢದ ಅರಣ್ಯದಲ್ಲಿ ಸಿಕ್ಕಿದ ಶವದ ಮೂಳೆಗಳು ಶೀನಾ ಬೋರಾಳದ್ದೇ ಎಂದು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ ಖಚಿತಪಡಿಸಿದೆ.
ಆಕೆಯನ್ನು ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ಪರೀಕ್ಷೆಯಿಂದ ತಿಳಿದುಬಂದಿದೆ.
ಶೀನಾ ಬೋರಾಳ ತಾಯಿ ಇಂದ್ರಾಣಿ ಮುಖರ್ಜಿ ಕಳೆದ ಆಗಸ್ಟ್ ನಲ್ಲಿ ಬಂಧನಕ್ಕೊಳಗಾದ ನಂತರ ಮುಂಬೈಯ ಜೈಲಿನಲ್ಲಿದ್ದಾರೆ. ಈಕೆಯ ಬಂಧನಕ್ಕೆ ಸ್ವಲ್ಪ ದಿನಕ್ಕೆ ಮೊದಲು ಪುತ್ರಿ ಶೀನಾ ಬೋರಾಳ ಶವದ ಅವಶೇಷಗಳು ರಾಯ್ ಗಢ ಅರಣ್ಯದಲ್ಲಿ ಸಿಕ್ಕಿತ್ತು.
ಮೃತದೇಹದ ಮೂಳೆ ತುಂಡುಗಳು, ತಲೆಬುರುಡೆ ಶೀನಾಳದ್ದೇ ಎಂದು ಡಿಎನ್ ಎ ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದರು. ನಂತರ ಕೇಸು ವಿಚಾರಣೆಯನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಅದು ಅವಶೇಷದ ವೈದ್ಯಕೀಯ ಪರೀಕ್ಷೆ ನಡೆಸುವಂತೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ತಿಳಿಸಿತ್ತು.
ಅವಶೇಷಗಳನ್ನು ಇದುವರೆಗೆ ಮೂರು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ.ಮತ್ತು ಇಂದ್ರಾಣಿ ಮುಖರ್ಜಿಯ ಡಿಎನ್ಎ ಮತ್ತು ರಕ್ತ ಪರೀಕ್ಷೆಯಲ್ಲಿ ಎಲ್ಲದರಲ್ಲಿಯೂ ಆಕೆ ಇಂದ್ರಾಣಿ ಮುಖರ್ಜಿಯ ಮಗಳು ಶೀನಾಳೇ ಎಂದು ದೃಢಪಟ್ಟಿದೆ.
ಶೀನಾ ಬೋರಾ 2012 ಏಪ್ರಿಲ್ ನಿಂದ ಕಣ್ಮರೆಯಾಗಿದ್ದಳು. ತಾಯಿ-ಮಗಳ ಮಧ್ಯೆ ಹಣಕಾಸಿನ ಭಿನ್ನಾಭಿಪ್ರಾಯದಿಂದ ಹತ್ಯೆ ನಡೆದಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಪೊಲೀಸರ ತನಿಖೆಯಿಂದ ಇಂದ್ರಾಣಿ ಮುಖರ್ಜಿ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ಜೊತೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇಂದ್ರಾಣಿಯನ್ನು ಮುಂಬೈ ಪೊಲೀಸರು ಆಗಸ್ಟ್ 28ರಂದು ಬಂಧಿಸಿದ್ದರು.