ಮಂಗಳೂರು: ಬಯಲುಸೀಮೆಗೆ ನೀರು ಪೂರೈಸುವ ಎತ್ತಿನಹೊಳೆ ಕಾಮಗಾರಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಷ್ಟ್ರೀಯ ಹಸಿರುಪೀಠ ಬುಧವಾರ ತನ್ನ ಮಧ್ಯಂತರ ತಡೆಯಾಜ್ಞೆಯಲ್ಲಿ ಆದೇಶಿಸಿದೆ.
ಒಂದೂವರೆ ತಿಂಗಳ ಹಿಂದೆ ಎತ್ತಿನಹೊಳೆ ಪ್ರಕರಣ ವಿಚಾರಣೆಗೆ ಬಂದಾಗ ಹಸಿರುಪೀಠ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆಗ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸುವುದಾಗಿ ನ್ಯಾಯಪೀಠದ ಮುಂದೆ ಹೇಳಿಕೆ ನೀಡಿದ್ದರು.
ಬಳಿಕ ಕಾಮಾಗಾರಿ ಮುಂದುವರಿಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದರು. ಬುಧವಾರ ನ್ಯಾ. ಜ್ಯೋತಿಮಣಿ ಮತ್ತು ನ್ಯಾ.ನಾಗೇಂದ್ರ ನೇತೃತ್ವದ ವಿಭಾಗೀಯ ಪೀಠದಲ್ಲಿ ಪ್ರಕರಣ ಮತ್ತೆ ವಿಚಾರಣೆಗೆ ಬಂದಿತು. ಕೋರ್ಟ್ ಆದೇಶ ಪಾಲಿಸದಿರುವ ಬಗ್ಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಕರ್ನಾಟಕ ನೀರಾವರಿ ನಿಗಮದ ಪರ ಸುಪ್ರೀಂ ವಕೀಲ ನವೀನ್ ಆರ್. ನಾಥ್ ವಾದ ಮಂಡಿಸಿದರು. ಮಧ್ಯಾಹ್ನದವರೆಗೆ ವಾದ ಆಲಿಸಿದ ನ್ಯಾಯಪೀಠ, ಇಂದು ಪೂರ್ತಿ ವಾದ ಮಂಡಿಸಲು ಸಾಧ್ಯವಾಗದಿದ್ದರೆ ನ್ಯಾಯಪೀಠದ ಷರತ್ತಿಗೆ ಒಪ್ಪಿಕೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನೀಡಿತ್ತು. ಆದರೂ ನಿಗಮ ಪರವಾದ ವಾದ ಪೂರ್ತಿಯಾಗಲಿಲ್ಲ.
ಕೊನೆಗೆ ನಿಗಮವು ಕಾಮಗಾರಿ ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಪಾಡುವುದಾಗಿ ನ್ಯಾಯಪೀಠಕ್ಕೆ ಒಪ್ಪಿಗೆ ಪತ್ರ ನೀಡಿತು. ಮುಂದಿನ ಆದೇಶದವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿ ಮುಂದಿನ ವಿಚಾರಣೆಯನ್ನು ಡಿ.7ಕ್ಕೆ ಮುಂದೂಡಿತು.
ಅಂದು ಪೂರ್ತಿವಾದ ಮಂಡಿಸುವಂತೆ ನೀರಾವರಿ ನಿಗಮಕ್ಕೆ ಸೂಚಿಸಿತು. ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿರುವುದರ ಬಗ್ಗೆ ಬೆಂಗಳೂರಿನ ಯತಿರಾಜು ಎಂಬವರು ಹಸಿರುಪೀಠಕ್ಕೆ ದೂರು ನೀಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos