ನವದೆಹಲಿ: ಅಸಹಿಷ್ಣುತೆ ಕುರಿತಂತೆ ಹೇಳಿಕೆ ನೀಡಿದ್ದ ನಟ ಅಮಿರ್ ಖಾನ್ ಅವರ ಕೆನ್ನೆಗೆ ಹೊಡೆದರೆ 1 ಲಕ್ಷ ಬಹುಮಾನವನ್ನು ನೀಡುತ್ತೇವೆಂದು ಪಂಜಾಬ್'ನ ಶಿವಸೇನೆ ಗುರುವಾರ ಹೇಳಿಕೊಂಡಿದೆ.
ಕಳೆದೆರಡು ದಿನಗಳ ಹಿಂದಷ್ಟೇ ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ನಟ ಅಮಿರ್ ಖಾನ್ ಅವರು, ಅಸಹಿಷ್ಣುತೆಯನ್ನು ವಿರೋಧಿಸಿ ಸಾಹಿತಿಗಳು ಪ್ರಶಸ್ತಿಗಳನ್ನು ವಾಪಸ್ಸು ನೀಡುತ್ತಿರುವುದನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ, ಕಳೆದ ಹಲವು ತಿಂಗಳುಗಳಿಂದ ತಾನೂ ಕೂಡ ಅಭದ್ರತಾ ಭಾವನೆ ಅನುಭವಿಸುತ್ತಿದ್ದೇನೆ. ದಿನನಿತ್ಯ ಪತ್ರಿಕೆಗಳಲ್ಲಿ ನೋಡುತ್ತಿರುವ ಸಂಗತಿಗಳು ನನ್ನನ್ನು ಆತಂಕ್ಕೀಡು ಮಾಡುತ್ತಿವೆ. ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ಬಗ್ಗೆ ಪತ್ನಿ ಜತೆ ಮಾತನಾಡುತ್ತಿರುವಾಗ, ನಾವು ದೇಶ ತೊರೆದು ಹೋಗೋಣವೇ ಎಂದು ಆಕೆ ನನ್ನನ್ನು ಕೇಳಿದ್ದಳು. ನನ್ನ ಪತ್ನಿ ಮಕ್ಕಳು ಹಾಗೂ ಅವರ ಭವಿಷ್ಯದ ಬಗ್ಗೆ ಹೆದರಿದ್ದಳು ಮತ್ತು ದಿನಪತ್ರಿಕೆಯನ್ನು ಓದಲು ಹೆದರುತ್ತಿದ್ದಳು ಎಂದು ಹೇಳಿದ್ದರು.
ಈ ಹೇಳಿಕೆಗೆ ಶಿವಸೇನೆಯ ಕಾರ್ಯಕರ್ತರು ಹಲವು ವಿರೋಧಗಳನ್ನು ವ್ಯಕ್ತಪಡಿಸಿದ್ದು, ಲುಧೀನಾದ ಬಳಿ ಇರುವ ರ್ಯಾಡಿಸನ್ ಬ್ಲು ಹೋಟೆಲ್ ಬಳಿ ಇಂದು ಅಮಿರ್ ಖಾನ್ ಹೇಳಿಕೆ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಪ್ರತಿಭಟನೆ ವೇಳೆ ಕಾರ್ಯಕರ್ತರು ಅಮಿರ್ ಖಾನ್ ವಿರುದ್ಧ ಅನುಚಿತ ಭಾಷೆಯಲ್ಲಿ ಬೈಯ್ಯುತ್ತಿದ್ದು, ಅಮಿರ್ ಖಾನ್ ಅವರ ಭಾವಚಿತ್ರವನ್ನು ದಹಿಸಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಪಂಜಾಬ್ ಶಿವಸೇನೆಯ ಮುಖ್ಯಸ್ಥ ರಾಜೀವ್ ಟಂಡನ್ ಅವರು, ಅಮಿರ್ ಅವರ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಒಂದು ಅವಕಾಶ ನೀಡಲು ಬಯುತ್ತೇವೆ. ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವ ಜನರು, ಹಾಗೂ ಸಿಬ್ಬಂದಿಗಳಲ್ಲಿ ಯಾರಾದರೂ ಅಮಿರ್ ಖಾನ್ ಅವರ ಕೆನ್ನಗೆ ಹೊಡೆದರೆ ಆ ವ್ಯಕ್ತಿಗೆ ನಾವು ರು.1 ಲಕ್ಷ ಬಹುಮಾನವನ್ನು ನೀಡುತ್ತೇವೆಂದು ಹೇಳಿದ್ದಾರೆ.
ಘಟನೆ ಕುರಿತಂತೆ ಹೋಟೆಲ್ ಆಡಳಿತ ಮಂಡಳಿಯವರು ಖಾಸಗಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಹೋಟೆಲ್ ಎಲ್ಲಾ ಸಿಬ್ಬಂದಿಗಳು ಪೊಲೀಸರಿಗೆ ಸಹಕಾರ ನೀಡುತ್ತಿದ್ದು, ಸ್ಥಳದ ಪರಿಸ್ಥಿತಿ ಬಗ್ಗೆ ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದು ಹೇಳಿಕೊಂಡಿದೆ.