ದೇಶ

ದೇಶದ ಜಾತ್ಯತೀತತೆಗೆ ಧಕ್ಕೆ ತಂದರೆ ಸುಮ್ಮನೆ ಬಿಡುವುದಿಲ್ಲ: ರಾಜನಾಥ್ ಸಿಂಗ್

Sumana Upadhyaya

ನವದೆಹಲಿ: ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸವನ್ನು ಅಕ್ರಮವಾಗಿ ತಿಂದ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪ್ರತಿಯೊಬ್ಬರೂ ಜಾತ್ಯತೀತತೆಯನ್ನು ಕಾಪಾಡಿಕೊಂಡು ಬರಬೇಕು. ದೇಶದ ಜಾತ್ಯತೀತತೆಗೆ ಧಕ್ಕೆಯನ್ನುಂಟುಮಾಡಿದರೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ದಾದ್ರಿಯಲ್ಲಿ ಮೊಹಮ್ಮದ್ ಇಕ್ಲಾಕ್ ನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ನೀಡುವ ವರದಿಯನ್ನು ಪರಿಶೀಲಿಸಿ ಕೇಂದ್ರ ಗೃಹ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ದೆಹಲಿಯಲ್ಲಿ ದಿವಂಗತ ರೈತ ಮಹೇಂದ್ರ ಸಿಂಗ್ ತಿಕೈತ್ ಅವರ 80ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ ಪಕ್ವವಾದ ಸಮಾಜವನ್ನು ಹೊಂದಿದೆ. ಇಂತಹ ಘಟನೆಗಳು ನಮ್ಮ ದೇಶದಲ್ಲಿ ನಡೆಯದಂತೆ ನೋಡಿಕೊಳ್ಳಬೇಕು, ಏಕೆಂದರೆ ಇಂತಹ ಪ್ರಕರಣಗಳು ದೇಶಕ್ಕೆ ಕೆಟ್ಟ ಹೆಸರನ್ನು ತರುತ್ತವೆ ಎಂದು ಹೇಳಿದ್ದಾರೆ.

ಈ ಮಧ್ಯೆ ಇಂದು ಉತ್ತರ ಪ್ರದೇಶ ಸರ್ಕಾರ ಘಟನೆ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ ಗೋಮಾಂಸ ಸೇವನೆ ಅಥವಾ ಗೋ ಹತ್ಯೆ ಹಿನ್ನೆಲೆಯಲ್ಲಿ ಮೊಹಮ್ಮದ್ ಇಕ್ಲಾಕ್ ನನ್ನು ಕೊಲ್ಲಲಾಯಿತು ಎಂಬ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಗೃಹ ಸಚಿವಾಲಯಕ್ಕೆ ಕಳುಹಿಸಿರುವ ವರದಿಯಲ್ಲಿ, ಇಕ್ಲಾಕ್ ಮತ್ತು ಅವರ ಪುತ್ರ ದನಿಶ್ ನ ಮೇಲೆ ದಾಳಿ ನಡೆಸಿದ ಅಪರಿಚಿತ ದುಷ್ಕರ್ಮಿಗಳು ಯಾಕೆ ದಾಳಿ ಮಾಡಿ ಕೊಂದರು ಎಂಬ ಬಗ್ಗೆ ನಿಖರವಾಗಿ ತಿಳಿಸಿಲ್ಲ. ವರದಿಯಲ್ಲಿ ದಾಖಲಿಸಿದ ಪ್ರಕಾರ ಪ್ರಾಥಮಿಕ ಮಾಹಿತಿ ನಡೆಸಿ ಕೆಲವು ಶಂಕಿತರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರದ ತನಿಖೆ ಮುಂದುವರಿದಿದೆ.

SCROLL FOR NEXT