ನವದೆಹಲಿ: ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬೇಳೆ ದಾಸ್ತಾನಿನ ಮೇಲೆ ದಾಳಿ ಮುಂದುವರೆಸಿರುವ ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯದ ಅಧಿಕಾರಿಗಳು 15,335.95 ಟನ್ವ ಶಪಡಿಸಿಕೊಂಡಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ 7,033, ಕರ್ನಾಟಕ 5,487.74, ರಾಜಸ್ಥಾನ 2,051 ಮತ್ತು ಹರಿಯಾಣದಿಂದ 764.07 ಟನ್ ಸೇರಿದೆ.
ಇದರೊಂದಿಗೆ ಕಳೆದ ನಾಲ್ಕು ದಿನಗಳಲ್ಲಿ ಒಟ್ಟಾರೆ 50,656.79 ಟನ್ ವಶಕ್ಕೆ ಪಡೆದಂತಾಗಿದೆ. ಸರಬರಾಜು ಹೆಚ್ಚಿಸಲು ಈ ಬೇಳೆಯನ್ನು ಮಾರುಕಟ್ಟೆಗೆ
ಬಿಡಲಾಗುವುದು. ದಾಳಿಯಿಂದ ಬೇಳೆ ಕಾಳು ದರ ಕಡಿಮೆಯಾಗಿರುವುದರ ಜೊತೆಗೆ ಫ್ಯೂಚರ್ ಟ್ರೇಡಿಂಗ್ ದರಗಳೂ ಇಳಿಮುಖ ಕಂಡಿವೆ ಎಂದು ಸಚಿವಾಲಯದ
ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಾಸ್ತಾನು ಮಿತಿ ತೆಗೆಯಲು ಮನವಿ: ಪ್ರತಿ ಕೆಜಿ ದರ ರು.135ರಂತೆ ಪ್ರತಿದಿನ 1 ಲಕ್ಷ ಕೆಜಿ ಬೇಳೆಕಾಳುಗಳನ್ನು ಮಾರುಕಟ್ಟೆಗೆ ಬಿಡಲಾಗುವುದು ಎಂದು ಸರ್ಕಾರಕ್ಕೆ ಹೇಳಿರುವ ಬೇಳೆ ಕಾಳು ಆಮದುದಾರರ ದಾಸ್ತಾನಿನ ಮೇಲೆ ಹೇರಿರುವ ಮಿತಿಯನ್ನು ತೆಗೆಯಬೇಕೆಂದು ಕೋರಿದ್ದಾರೆ. ಬೇಳೆ ಕಾಳು ದರಗಳು ನಿರಂತರವಾಗಿ ಏರುತ್ತಿರುವುದರಿಂದ ಕೇಂದ್ರ ಸರ್ಕಾರ ಆಮದು ಮತ್ತು ರಫ್ತುದಾರರು ಹೊಂದಿರುವ ಆಹಾರ ಸಂಸ್ಕರಣೆ ಕಂಪನಿಗಳ ಮೇಲೆ ದಾಸ್ತಾನು ಮೀತಿ ಹೇರಿದೆ. ಅಂತರ ಸಚಿವಾಲಯ ಸಮಿತಿ ಸಭೆಯ ಭಾಗವಾಗಿ ಶುಕ್ರವಾರ ಬೇಳೆ ವರ್ತಕರೊಂದಿಗೆ ಕೇಂದ್ರ ಹಣಕಾಸು ಸಚಿವ ಜೇಟ್ಲಿ ಕರೆದಿದ್ದ ಮಾತುಕತೆ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿಗಳು ಆಮದು ಮಾಡಿಕೊಳ್ಳುವುದರಿಂದ ಮಾತ್ರ ಬೆಳೆ ಕಾಳುದರಗಳು ಕಡಿಮೆಯಾಗಲಿವೆ ಎಂದರು.