ದೇಶ

ಬಿಹಾರದಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಮನೆಗೆ ನುಗ್ಗಿ ಪತ್ರಕರ್ತನ ಬರ್ಬರ ಹತ್ಯೆ

ಬಿಹಾರ: ಉತ್ತರಪ್ರದೇಶದ ನಂತರ ಇದೀಗ ಬಿಹಾರದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಪ್ರಾರಂಭವಾಗಿದ್ದು, ದೈನಿಕ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತನೊಬ್ಬನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯೊಂದು ಗಯಾನಗರದಲ್ಲಿ ಶನಿವಾರ ನಡೆದಿದೆ.

ಮಿಥಿಲೇಶ್ ಕುಮಾರ್ ಪಾಂಡೆ(40) ಹತ್ಯೆಯಾದ ಪತ್ರಕರ್ತನಾಗಿದ್ದು, ದೈನಿಕ ಪತ್ರಿಕೆಯೊಂದರಲ್ಲಿ ಹಲವು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ಸಂಜೆ ಕೆಲಸ ಮುಗಿಸಿ 7ರ ಸುಮಾರಿಗೆ ಮನೆಗೆ ಬಂದಿದ್ದಾರೆ. ಮಿಥಿಲೇಶ್ ಮನೆಗೆ ಬರುವುದನ್ನೇ ಕಾದು ಕುಳಿತಿದ್ದ ದುಷ್ಕರ್ಮಿಗಳು ಮಿಥಿಲೇಶ್ ಮನೆಯೊಳಗೆ ಹೋಗುತ್ತಿದ್ದಂತೆ ಮನೆಗೆ ನುಗ್ಗಿದ್ದಾರೆ. ನಂತರ ಪಿಸ್ತೂಲಿನಿಂದ ಎರಡು ಬಾರಿ ಮಿಥಿಲೇಶ್ ಮೇಲೆ ಗುಂಡಿ ಹಾರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಿಥಿಲೇಶ್ ನನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರದರೂ ಅಷ್ಟರಲ್ಲಾಗಲೇ ಮಿಥಿಲೇಶ್ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ. ಮೃತ ಪತ್ರಕರ್ತ ಮಿಥಿಲೇಶ್ ಅವರು ವಿವಾಹಿತರಾಗಿದ್ದು, ಪತ್ನಿ ಜ್ಯೋತಿ ದೇವಿ, ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನಿದ್ದಾನೆಂದು ತಿಳಿದುಬಂದಿದೆ. ಘಟನೆಗೆ ಪ್ರಮುಖ ಕಾರಣ ಈ ವರೆಗೂ ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿರುವ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

SCROLL FOR NEXT