ದೇಶ

ವಾರಣಾಸಿಗೆ ಪ್ರಧಾನಿ ಭೇಟಿ

Rashmi Kasaragodu

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಮೋದಿಯವರು ಇಂದು ಅಲ್ಲಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಿದ್ದು, ಪ್ರತಿಭಟನೆ ನಿರತರಾಗಿರುವ ಗುತ್ತಿಗೆ ಕೆಲಸದ ಶಿಕ್ಷಕರನ್ನು ಭೇಟಿ ಮಾಡಲಿದ್ದಾರೆ.

ಇವತ್ತು ಒಂದು ಇಡೀ ದಿನ ಮೋದಿ ವಾರಣಾಸಿಯಲ್ಲಿ ಕಳೆಯಲಿದ್ದಾರೆ. ಅಲ್ಲಿ ಅವರು  ಜನ್ ಧನ್ ಯೋಜನೆಯಡಿಯಲ್ಲಿ  600 ಜನರಿಗೆ ಸೈಕಲ್ ರಿಕ್ಷಾ ಮತ್ತು ಇ ರಿಕ್ಷಾಗಳನ್ನು ವಿತರಿಸಲಿದ್ದಾರೆ.

ಆದಾಗ್ಯೂ, ಸೈಕಲ್ ರಿಕ್ಷಾಗಳನ್ನು ವಿತರಿಸುವುದಕ್ಕೆ ಉತ್ತರ ಪ್ರದೇಶದ ಸಮಾಜವಾದಿ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಸೈಕಲ್ ರಿಕ್ಷಾಗಳನ್ನು ತುಳಿಯುವುದು ಅಮಾನವೀಯ ಕೆಲಸ. ಆದ್ದರಿಂದ ಮೋದಿಯವರು ಸೈಕಲ್ ರಿಕ್ಷಾಗಳನ್ನು ವಿತರಿಸುವ ತೀರ್ಮಾನ ಕೈ ಬಿಡಬೇಕು ಎಂದು ಸರ್ಕಾರ ಒತ್ತಾಯಿಸಿದ್ದಾರೆ.

ಅದೇ ವೇಳೆ ಮೋದಿ ಶಿಕ್ಷಾ ಮಿತ್ರ (ಗುತ್ತಿಗೆ ಶಿಕ್ಷಕರು)ರನ್ನು ಭೇಟಿ ಮಾಡಲಿದ್ದಾರೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ಹೇಳಿದ್ದಾರೆ.

ಸುಮಾರು 1.72 ಲಕ್ಷ ಶಿಕ್ಷಾ ಮಿತ್ರರು ಈಗ ಪ್ರತಿಭಟನಾ ನಿರತರಾಗಿದ್ದಾರೆ. ಕಳೆದ ಭಾನುವಾರ ಪ್ರತಿಭಟನಾ ನಿರತ ಶಿಕ್ಷಕರೊಬ್ಬರು ಕನೌಜ್ ಜಿಲ್ಲೆಯಲ್ಲಿ ಆತ್ಮ ಹತ್ಯೆ ಮಾಡಿದ್ದರು.

ಇಂದಿನ ಭೇಟಿಯಲ್ಲಿ ಮೋದಿಯವರು ಇಂಟಗ್ರೇಟೆಡ್ ಪವರ್ ಡೆವಲೆಪ್‌ಮೆಂಟ್ ಯೋಜನೆಗೆ ಚಾಲನೆ ನೀಡಲಿದ್ದಾರೆ.

SCROLL FOR NEXT