ಪೋಂಡಾ(ಗೋವಾ): ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆ ಆರೋಪದಲ್ಲಿ ತಳುಕು ಹಾಕಿಕೊಂಡಿರುವ ಸನಾತನ ಸಂಸ್ಥೆಯು ಗೋವಾದಲ್ಲಿ ಆಧ್ಯಾತ್ಮಿಕ ವಿಶ್ವವಿದ್ಯಾಲಯನ್ನು ಹೊಂದಿದೆ.
ವಿಶ್ವವಿಖ್ಯಾತ ಸಮ್ಮೋಹನ ವಿದ್ಯಾ ಪರಿಣತ ಡಾ. ಜಯಂತ್ ಬಾಲಾಜಿ ಅಠಾವಳೆ(77)ಎಂಬವರೇ ಇದರ ಸ್ಥಾಪಕ. ಪಣಜಿಯಿಂದ 28 ಕಿ.ಮೀ. ದೂರದ ಬಂಡೋಡೆಯಲ್ಲಿ ಇದರ ಪ್ರಧಾನ ಕಚೇರಿಯಿದೆ. ಈಗ ಸಂಸ್ಥೆ ವಿರುದ್ಧ ಕೇಳಿ ಬಂದಿರುವ ಎಲ್ಲ ಆರೋಪಗಳನ್ನೂ ಸನಾತನ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವೀರೇಂದ್ರ ಪಿ. ಮರಾಠೆ ತಳ್ಳಿಹಾಕಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ನರೇಂದ್ರ ದಾಭೋಲ್ಕರ್, ಪಾನ್ಸರೆ, ಎಂ.ಎಂ. ಕಲಬುರಗಿ ಮತ್ತಿತರರು ನಮ್ಮ ದೇವ-ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದರಿಂದ ನಮಗೆ ನೋವಾಗಿದೆ. ಆದರೆ, ಇಂಥದ್ದರ ವಿರುದ್ಧ ನಾವೇನಿದ್ದರೂ ಪ್ರಜಾಸತ್ತಾತ್ಮಕ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತೇವೆಯೇ ಹೊರತು, ಹಿಂಸೆಯನ್ನು ಪ್ರಚೋದಿಸುವುದಿಲ್ಲ ಎಂದಿದ್ದಾರೆ ಮರಾಠೆ. ಜತೆಗೆ, ಪಾನ್ಸರೆ ಹತ್ಯೆ ಸಂಬಂಧ ಬಂಧಿಸಲ್ಪಟ್ಟಿರುವ ಸನಾತನ ಸಂಸ್ಥೆಯ ಸದಸ್ಯ ಸಮೀರ್ ಗಾಯಕ್ವಾಡ್ ಅಮಾಯಕ. ಅವರೇನೂ ತಪ್ಪು ಮಾಡಿಲ್ಲ. ಅದಕ್ಕಾಗಿ ನಮ್ಮ ಸಂಸ್ಥೆಯ ವಕೀಲರನ್ನೇ ಅವರ ಪರ ವಾದಿಸಲು ನೇಮಿಸಿದ್ದೇವೆ ಎಂದೂ ಅವರು ಹೇಳಿದ್ದಾರೆ.
95 ಸಾವಿರ ಚಂದಾದಾರರು: ಕಳೆದ 10 ವರ್ಷಗಳಿಂದಲೂ ಸಂಸ್ಥೆಯ ಸ್ಥಾಪಕ ಅಠಾವಳೆ ಅವರು ಸಂದರ್ಶಕರನ್ನು ಭೇಟಿಯಾಗಿಲ್ಲ. ನಮ್ಮ ಸಂಸ್ಥೆಯಲ್ಲಿರುವವರಲ್ಲಿ ಹೆಚ್ಚಿನವರು ಮಹಿಳಾ ಪ್ರತಿನಿಧಿಗಳು ಮತ್ತು ಮಾಜಿ ಪತ್ರಕರ್ತರು. ಅವರೇ ದೈನಿಕ್ ಸಂಸ್ಥಾ ಪ್ರಭ ಎಂಬ ಮುಖವಾಣಿಯನ್ನು ಪ್ರಕಟಿ ಸುತ್ತಿದ್ದಾರೆ. ಇದರಲ್ಲಿ ಹಿಂದುತ್ವ ಮತ್ತು ಇತರೆ ಸಿದ್ಧಾಂತಗಳನ್ನು ಪ್ರತಿಪಾದಿಸಲಾಗುತ್ತದೆ. ರತ್ನಗಿರಿ, ಗೋವಾ-ಸಿಂಧುದುರ್ಗ, ಮುಂಬೈ, ಪುಣೆ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಹಿಂದಿ, ಇಂಗ್ಲಿಷ್, ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಇದು ಪ್ರಕಟವಾಗುತ್ತಿದ್ದು, 95 ಸಾವಿರ ಚಂದಾದಾರರಿದ್ದಾರೆ ಎಂದಿದ್ದಾರೆ ಮರಾಠೆ. ಪ್ರಧಾನ ಕಚೇರಿಯ 2ನೇ ಮಹಡಿ ಯಲ್ಲಿ ಸುವ್ಯವಸ್ಥಿತ ಆಡಿಯೋ-ವಿಡಿಯೋ ಪ್ರೋಡಕ್ಷನ್ ಸೆಂಟರ್ ಇದೆ. ಕಚೇರಿಯ ಆವರಣದಲ್ಲಿ ಅಲೋಪತಿ ಮತ್ತು ಆಯುರ್ವೇದಿಕ್ ಔಷಧಗಳ ಕ್ಲಿನಿಕ್ಗಳೂ ಇವೆ.