ನವದೆಹಲಿ: ಧರ್ಮಕ್ಕೆ ವಿರುದ್ಧವಾದ ಕೃತ್ಯವೆಸಗುತ್ತಿರುವ ಹಾಗು ಮುಸ್ಲಿಂ ವಿರುದ್ಧ ಕಾರ್ಯಗಳನ್ನೆಸಗುತ್ತಿರುವ ಇಸಿಸ್ ವಿರುದ್ಧ ಹೋರಾಡಲು ಇದೀಗ ಮುಸ್ಲಿಂ ಸಂಘಟನೆಗಳೇ ಮುಂದಾಗಿವೆ. ಮುಸ್ಲಿಂ ಸಮುದಾಯದ ಚರಿತ್ರೆಯನ್ನು ನಾಶ ಮಾಡುತ್ತಿರುವ ಉಗ್ರ ಸಂಘಟನೆಗಳು ಮತ್ತು ಇಸಿಸ್ ಸಂಘಟನೆಗಳನ್ನು ಹಿಮ್ಮೆಟ್ಟಿಸಲು ದೇಶದ ಮುಸ್ಲಿಂ ಸಂಘಟನೆಗಳು ಚಳವಳಿ ಆರಂಭಿಸಿವೆ.
ದೆಹಲಿ, ಜೋದಾಪುರ್, ಕೋಝಿಕ್ಕೋಡ್ ಮತ್ತು ಲಕ್ನೋದಲ್ಲಿ ಮುಸ್ಲಿಂ ಸಂಘಟನೆಗಳು ಚಳವಳಿ ಆರಂಭಿಸಿದ್ದು ಇಸಿಸ್ ಸಂಘಟನೆಗಳ ವಿರುದ್ಧ ಹೋರಾಡಲು ಕರೆ ನೀಡಿವೆ. ಮುಗ್ಧ ಜನರನ್ನು ಪೈಶಾಚಿಕ ರೀತಿಯಲ್ಲಿ ಕೊಲ್ಲುವ ಇಸಿಸ್ ಮತ್ತು ಅದಕ್ಕೆ ಸಂಬಂಧಪಟ್ಟ ಉಗ್ರ ಸಂಘಟನೆಗಳು ಮುಸ್ಲಿಂ ಧರ್ಮಕ್ಕೆ ವಿರುದ್ಧವಾಗಿ ವರ್ತಿಸುತ್ತಿವೆ. ಅಂಥಾ ಸಂಘಟನೆಗಳಿಂದ ದೂರವಿರುವಂತೆ ಮುಸ್ಲಿಂ ಸಂಘಟನೆಗಳು ತಮ್ಮ ಧರ್ಮೀಯರಿಗೆ ಕರೆ ನೀಡಿವೆ.
ಗೃಹ ಸಚಿವಾಲಯದ ವರದಿ ಪ್ರಕಾರ, ಕೇರಳದಲ್ಲಿ ಇತ್ತೆಹದುಲ್ ಸುಭಾನಿಲ್ ಮುಜಾಹಿದ್ದೀನ್ ಎಂಬ ಸಂಘಟನೆ ಸೆಪ್ಟೆಂಬರ್ 20ರಂದು ಕೋಝಿಕ್ಕೋಡ್ನಲ್ಲಿ ಯೂತ್ ಮೂವ್ಮೆಂಟ್ ಅಗೈನ್ಸ್ಟ್ ಐಎಸ್ ಟೆರರಿಸಂ ಎಂಬ ಬ್ಯಾನರ್ ಹಾಕಿ ರಾಜ್ಯ ಮಟ್ಟದ ಸಮ್ಮೇಳನ ನಡೆಸಿತ್ತು. ಈ ಸಮ್ಮೇಳನವನ್ನು ಟಿಪಿ ಅಬ್ದುಲ್ಲ ಕೋಯಾ ಮಅದನಿ ಉದ್ಘಾಟಿಸಿದ್ದರು.
ಮಧ್ಯಪ್ರಾಚ್ಯದಲ್ಲಿರುವ ಉಗ್ರ ಸಂಘಟನೆಗಳು ಮಾಡುತ್ತಿರುವ ಉಗ್ರ ಕೃತ್ಯಗಳಿಂದಾಗಿ ಮುಸ್ಲಿಂ ಸಮುದಾಯದ ಚರಿತ್ರೆಯೇ ಹಾಳಾಗುತ್ತದೆ. ಇವುಗಳ ಅಟ್ಟಹಾಸದಿಂದ ಐತಿಹಾಸಿಕ ಸ್ಮಾರಕಗಳು ನಾಶವಾಗುತ್ತಿವೆ. ಅಂಥಾ ಸಂಘಟನೆಗಳನ್ನು ನಾವೆಲ್ಲರೂ ವಿರೋಧಿಸಬೇಕೆಂದು ಮಅದನಿ ಮುಸ್ಲಿಂ ಜನರಿಗೆ ಹೇಳಿದ್ದಾರೆ.
ಅದೇ ವೇಳೆ ಇಸಿಸ್ ಸಂಘಟನೆಯು ಜಿಹಾದ್ ಮತ್ತು ಖಿಲಾಫತ್ ನ ಅರ್ಥವನ್ನೇ ಬದಲಿಸಿವೆ. ಸುನ್ನಿ ಮತ್ತು ಶಿಯಾ ಪ್ರತ್ಯೇಕತಾವಾದಿಗಳಿಂದಾಗಿ ಮುಸ್ಲಿಂ ಸಮುದಾಯವೇ ನಾಶವಾಗುತ್ತಿದೆ ಎಂದು ಮಅದನಿ ಅಭಿಪ್ರಾಯಪಟ್ಟಿದ್ದಾರೆ.
ರಾಜಸ್ತಾನದಲ್ಲಿ ಜಾಮಿಯತ್ ಅಹ್ಲೇ ಹಡೀಸ್ ಎಂಬ ಮುಸ್ಲಿಂ ಸಂಘಟನೆ ಇಸಿಸ್ ಉಗ್ರವಾದದ ವಿರುದ್ಧ ದನಿಯೆತ್ತಿದೆ.
ದೆಹಲಿಯಲ್ಲಿಯೂ ಹಲವಾರು ಮುಸ್ಲಿಂ ಸಂಘಟನೆಗಳು ಸೆಪ್ಟೆಂಬರ್ 17ರಂದು ಶಾಂತಿ ಸಮ್ಮೇಳನವನ್ನೇರ್ಪಡಿಸಿ ಇಸಿಸ್ ವಿರುದ್ಧ ಚಳವಳಿಗೆ ಧುಮುಕಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos