ದೇಶ

ಕೇದಾರನಾಥ ಜಲಪ್ರಳಯಕ್ಕೆ ಹನಿಮೂನ್ ಗಾಗಿ ಬಂದವರೇ ಕಾರಣ: ಸ್ವರೂಪಾನಂದ ಸರಸ್ವತಿ

Srinivas Rao BV

ಹರಿದ್ವಾರ: ಪ್ರವಾಸಿಗರು, ನವವಿವಾಹಿತರ ಅಪವಿತ್ರ ಕೃತ್ಯಗಳಿಂದ  2013 ರಲ್ಲಿ ಕೇದಾರನಾಥದಲ್ಲಿ ಜಲಪ್ರಳಯ ಉಂಟಾಗಿತ್ತು ಎಂದು ದ್ವಾರಕಾ ಶಾರದಾಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.
ಹರಿದ್ವಾರಕ್ಕೆ 16 ದಿನಗಳ ಯಾತ್ರೆ ಕೈಗೊಂಡಿರುವ ಅವರು, ಶನಿ ಶಿಂಗ್ಣಾಪುರ ದೇವಾಲಯಕ್ಕೆ ಮಹಿಳೆಯರ ಭೇಟಿ ನೀಡುವ ವಿಚಾರ ಹಾಗೂ ಮಹಾರಾಷ್ಟ್ರದಲ್ಲಿ ಬರ ಎದುರಾಗುವುದರ ಬಗ್ಗೆ ಹೇಳಿಕೆ ನೀಡಿದ್ದರು. ಮಹಿಳೆಯರು ಶನಿಶಿಂಗ್ಣಾಪುರ ದೇವಾಲಯದ ಗರ್ಭಗುಡಿ ಪ್ರವೇಶಿಸುವುದರಿಂದ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಲಿವೆ ಎಂದಿದ್ದರು. ಅಲ್ಲದೇ ಮಹಾರಾಷ್ಟ್ರದಲ್ಲಿ ಸಾಯಿ ಬಾಬ ಮೂರ್ತಿಯನ್ನು ಪೂಜಿಸುವುದರಿಂದ ಬರ ಎದುರಾಗಿದೆ ಎಂದೂ ತಿಳಿಸಿದ್ದರು.  
1982 ರಲ್ಲಿ ದ್ವಾರಕಾಪೀಠದ ಶಂಕರಾಚಾರ್ಯರಾದಾಗಿನಿಂದಲೂ ಸ್ವರೂಪಾನಂದ ಸರಸ್ವತಿ ವಿವಾದಾತ್ಮಕ ಹೇಳಿಕೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಇಸ್ಕಾನ್ ಹಾಗೂ ಆರ್ ಎಸ್ ಎಸ್ ನ್ನೂ ಬಿಡದ ಸ್ವರೂಪಾನಂದ ಸರಸ್ವತಿ ಇಸ್ಕಾನ್ ನನ್ನು ಹಣ ವರ್ಗಾವಣೆ ಮಾಡಲು ಇರುವ ಸಂಸ್ಥೆ ಎಂದು ಹೇಳಿದ್ದರು, ಇನ್ನು ಅರುಣಾಚಲ ಪ್ರದೇಶದಲ್ಲಿ ಆರ್ ಎಸ್ಎಸ್ ಕಾರ್ಯಕರ್ತರೆಂದು ಹೇಳಿಕೊಳ್ಳುವವರು ಗೋಮಾಂಸ ಭಕ್ಷಣೆ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.  ಸಾಯಿ ಬಾಬಾ, ಇಸ್ಕಾನ್, ಆರ್ ಎಸ್ ಎಸ್, ಶನಿ ಶಿಂಗ್ಣಾಪುರದ ಬಗ್ಗೆ ಹೇಳಿಕೆಗಳ ನಂತರ ಈಗ ಕೇದಾರನಾಥದಲ್ಲಿ ಜಲಪ್ರಳಯ ಉಂಟಾಗಲು ಪ್ರವಾಸಿಗರ, ನವವಿವಾಹಿತರ ಅಪವಿತ್ರ ಕೃತ್ಯದ ಪರಿಣಾಮ ಜಲಪ್ರಳಯ ಸಂಭವಿಸಿತ್ತು ಎಂದು ಹೇಳಿದ್ದಾರೆ.

SCROLL FOR NEXT