ಮುಂಬೈ: ಮುಂಬೈ ಹಾಜಿ ಅಲಿ ದರ್ಗಾದೊಳಗೆ ಮಹಿಳೆಯರಿಗೆ ಪ್ರವೇಶ ಅನುಮತಿ ನೀಡಬೇಕೆಂದು ಬಯಸಿ ಭೂಮಾತಾ ರಣ್ರಾಗಿನಿ ಬ್ರಿಗೇಡ್ ಚಳುವಳಿ ಆರಂಭಿಸಲಿದೆ ಎಂದು ತೃಪ್ತಿ ದೇಸಾಯಿ ಹೇಳಿಕೆ ನೀಡಿರುವ ಬೆನ್ನಲ್ಲೇ, ಈ ಚಳುವಳಿಗೆ ಶಿವಸೇನೆ ತೀವ್ರ ವಿರೋಧ ವ್ಯಕ್ತ ಪಡಿಸಿದೆ.
2014ರಲ್ಲಿ ಮಹಾರಾಷ್ಟ್ರ ನವ್ನಿರ್ಮಾಣ ಸೇನೆ ತೊರೆದು ಶಿವಸೇನೆ ಸೇರಿದ್ದ ಹಾಜಿ ಅರಾಫತ್ ಶೇಖ್, ತೃಪ್ತಿ ದೇಸಾಯಿ ಅವರ ತೀರ್ಮಾನದ ಬಗ್ಗೆ ಗುಡುಗಿದ್ದಾರೆ. ಒಂದು ವೇಳೆ ಭೂಮಾತಾ ರಣ್ರಾಗಿನಿ ಬ್ರಿಗೇಡ್ ನಾಯಕಿ ತೃಪ್ತಿ ದೇಸಾಯಿ ಹಾಜಿ ಅಲಿ ದರ್ಗಾಗೆ ಪ್ರವೇಶಿಸಲು ಯತ್ನಿಸಿದರೆ ಆಕೆಗ ಚಪ್ಪಲಿಯೇಟು ಬೀಳುತ್ತದೆ ಎಂದು ಶೇಖ್ ಹೇಳಿದ್ದಾರೆ.
ಪ್ರಸ್ತುತ ಬ್ರಿಗೇಡ್ನ ನಾಯಕಿ ತೃಪ್ತಿ ದೇಸಾಯಿ ಮತ್ತು ಇನ್ನಿತರ ಕಾರ್ಯಕರ್ತರು, ಎನ್ಜಿಒ ಮತ್ತು ಮಹಿಳೆಯರಿಗೆ ದೇಗುಲ ಪ್ರವೇಶ ನೀಡಬೇಕೆಂದು ಒತ್ತಾಯಿಸಿ ಅದಕ್ಕಾಗಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರ ಗುಂಪು ಏಪ್ರಿಲ್ 20 ರಂದು ಹಾಜಿ ಅಲಿ ಫಾರ್ ಆಲ್ ಎಂಬ ಫಾರಂ ನ್ನು ಆರಂಭಿಸಿತ್ತು.
ಏಪ್ರಿಲ್ 28ಕ್ಕೆ ಹಾಜಿ ಅಲಿ ದರ್ಗಾಗೆ ಪ್ರವೇಶ ಅನುಮತಿಸುವಂತೆ ನಾವು ಚಳುವಳಿ ಆರಂಭಿಸಲಿದ್ದೇವೆ. ಆದಾಗ್ಯೂ, ನಾವು ದೇವಾಲಯದ ಟ್ರಸ್ಟಿಗಳೊಂದಿಗೆ ಮಾತುಕತೆಗೆ ತಯಾರಿದ್ದೇವೆ ಎಂದು ದೇಸಾಯಿ ಹೇಳಿದ್ದರು.
ಅದೇ ವೇಳೆ ದರ್ಗಾ ಪ್ರವೇಶಕ್ಕಾಗಿ ದೇಶದಾದ್ಯಂತವಿರುವ ಮುಸ್ಲಿಂ ಮಹಿಳೆಯರು ಸಹಕಾರ ನೀಡಬೇಕೆಂದು ದೇಸಾಯಿ ಆಹ್ವಾನ ನೀಡಿದ್ದರು.