ನವದೆಹಲಿ: ನೂತನ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬುಧವಾರ ಅನುಮೋದನೆ ನೀಡಲಾಗಿದ್ದು, ಹಾಲಿ ಸಂಚಾರಿ ಕಾಯ್ದೆಯನ್ನು ಕಠಿಣಗೊಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮೋಟಾರು ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ಪರಿಷ್ಕೃತ ಕಾನೂನು ಅಸ್ತಿತ್ವಕ್ಕೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸಂಪುಟಸಭೆಯಲ್ಲಿ ಅನುಮೋದನೆಗೊಂಡಿರುವ ತಿದ್ದುಪಡಿ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿ ಅನುಮೋದನೆ ಪಡೆದ ಬಳಿಕ ದೇಶಾದ್ಯಂತ ಜಾರಿಯಾಗಲಿದೆ.
ಪರಿಷ್ಕೃತ ಕಾನೂನಿನ ಪ್ರಕಾರ, ಸಂಚಾರಿ ನಿಯಮಗಳ ಉಲ್ಲಂಘನೆಗೆ ಬೃಹತ್ ಮೊತ್ತದ ದಂಡ ವಿಧಿಸು ಅವಕಾಶವಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ 10,000ರು, ವಿಮೆ ಇಲ್ಲದೆ ಚಾಲನೆ ಮಾಡಿದರೆ 2,000 ರೂ. ದಂಡ ಅಥವಾ ಮೂರು ತಿಂಗಳ ಮಟ್ಟಿಗೆ ಪರವಾನಗಿ ಅಮಾನತುಗೊಳಿಸಬಹುದಾಗಿದೆ. ಅಂತೆಯೇ ಹಿಟ್ ಆಂಡ್ ರನ್ ಪ್ರಕರಣಗಳಲ್ಲಿ 2 ಲಕ್ಷ ರು.ವರೆಗೆ ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ.
ಇದಲ್ಲದೆ ರಸ್ತೆ ಅಪಘಾತದಿಂದ ಸಾವು ಸಂಭವಿಸಿದರೆ 10 ಲಕ್ಷ ರುಪಾಯಿವರೆಗೆ ಪರಿಹಾರ ನೀಡುವ ಬಗ್ಗೆಯೂ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಅಂತೆಯೇ ಓವರ್ಸ್ಪೀಡ್ಗೆ ಸಾವಿರ ರು.ಗಳಿಂದ 4,000 ರು.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಪರವಾನಗಿ ರಹಿತ ಚಾಲನೆಗೆ 5 ಸಾವಿರ ರು, ಕಾರು ಪರವಾನಗಿ ರಹಿತ ಚಾಲನೆಗೆ 10 ಸಾವಿರ ರು ದಂಡ ವಿಧಿಸಬಹುದಾಗಿದೆ. ಸಂಪುಟ ಸಭೆ ಬಳಿಕ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ‘ರಸ್ತೆ ಸುರಕ್ಷತೆ ಮತ್ತು ಲಕ್ಷಾಂತರ ಮುಗ್ಧ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಕ್ರಮವಾಗಿದೆ. 18 ರಾಜ್ಯಗಳ ಸಾರಿಗೆ ಸಚಿವರ ಶಿಫಾರಸು ಆಧರಿಸಿ ಕಾಯ್ದೆ ರೂಪಿಸಲಾಗಿದೆ’ಎಂದು ಹೇಳಿದರು.