ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ(ಸಂಗ್ರಹ ಚಿತ್ರ)
ನವದೆಹಲಿ: ಒಂದೆಡೆ ಲೋಕಸಭೆಯಲ್ಲಿ ನಿನ್ನೆ ಐತಿಹಾಸಿಕ ಸರಕು ಮತ್ತು ಸೇವಾ ಮಸೂದೆಗೆ ಅಂಗೀಕಾರ ಸಿಕ್ಕಿ ಸರ್ಕಾರ ಸಂತೋಷದ ಕಡಲಲ್ಲಿ ತೇಲಾಡುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದೊಳಗೆ ಕುದಿಯುತ್ತಿರುವ ಅಸಮಾಧಾನ ನಿನ್ನೆ(ಸೋಮವಾರ) ಹೊರಗೆ ಬಂದು ಅಪಸ್ವರ, ಆರೋಪಗಳಿಂದ ಸರ್ಕಾರ ಮುಕ್ತವಾಗಿಲ್ಲ.
ಸರಕು ಮತ್ತು ಸೇವಾ ತೆರಿಗೆ ಮಸೂದೆ ಸಂಧಾನದ ವೇಳೆ ಲೋಕಸಭೆಯ ಹಿರಿಯ ಸಚಿವರನ್ನು ಸರ್ಕಾರ ಕಡೆಗಣಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ನಿನ್ನೆ ಸದನದಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು. ಮಸೂದೆ ಕುರಿತು ಲೋಕಸಭಾ ಸದಸ್ಯರಲ್ಲಿ ಸರಿಯಾಗಿ ಚರ್ಚಿಸಿ ಅಭಿಪ್ರಾಯ ತೆಗೆದುಕೊಂಡಿಲ್ಲ ಸರ್ಕಾರ ಎಂದು ದೂರಿದರು. ಇದಕ್ಕೆ ನಂತರ ನಿನ್ನೆ ಅಪರಾಹ್ನ ಪ್ರಧಾನ ಮಂತ್ರಿ ಪ್ರತಿಕ್ರಿಯೆ ನೀಡಿದ ಪ್ರಸಂಗವೂ ನಡೆಯಿತು.
ತೀವ್ರ ಅಸಮಾಧಾನದಿಂದ ಪ್ರತಿಕ್ರಿಯೆ ನೀಡಿದ ಲೋಕಸಭಾ ಸದಸ್ಯ ವೀರಪ್ಪ ಮೊಯ್ಲಿ, ಈ ಸದನವನ್ನು ಕಿರಿಯ ಪಾಲುದಾರನಂತೆ ಪರಿಗಣಿಸಲಾಗುತ್ತದೆ. ನಾವು ಯಾವಾಗಲೂ ರಾಜ್ಯಸಭೆ ಹೆಚ್ಚು ಮುಖ್ಯ ಎಂದು ಭಾವಿಸುತ್ತೇವೆ. ಹಾಗಾಗಿ ನೀವು ಪ್ರತಿಯೊಂದು ವಿಷಯವನ್ನು ರಾಜ್ಯಸಭೆಯಲ್ಲಿ ಚರ್ಚಿಸುತ್ತೀರಿ ಎಂದರು.
ಪ್ರತಿಪಕ್ಷದ ಸಂಖ್ಯೆಬಲ ಹೆಚ್ಚಾಗಿರುವುದು ರಾಜ್ಯಸಭೆಯಲ್ಲಿ. ಹಾಗಾಗಿ ಜಿಎಸ್ ಟಿಯ 122ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅನುಮೋದಿಸಲು 3ರಲ್ಲಿ 2 ಭಾಗದಷ್ಟು ಬಹುಸಂಖ್ಯೆಯಿರುವ ವಿರೋಧ ಪಕ್ಷದ ಬೆಂಬಲ ಸರ್ಕಾರಕ್ಕೆ ಬೇಕಾಗಿತ್ತು. ಲೋಕಸಭೆ ಸದಸ್ಯರು ಬೇಡಿಕೆಯಿಟ್ಟಂತೆ ಜಂಟಿ ಸದನ ಸಮಿತಿ ರಚನೆಯನ್ನು ಕಡೆಗಣಿಸಿ ಜಿಎಸ್ ಟಿ ಮಸೂದೆಯ ಸಾಧ್ಯತೆಗಳನ್ನು ಪರಿಶೀಲಿಸಲು ರಾಜ್ಯಸಭೆಯ ಆಯ್ಕೆ ಸಮಿತಿಯನ್ನು ರಚಿಸಲಾಯಿತು ಎಂದು ಆಪಾದಿಸಿದರು.
ಲೋಕಸಭೆಯಲ್ಲಿ ಬುದ್ಧಿವಂತರು, ಮೆದುಳು ಇರುವವರು ಇಲ್ಲ, ಎಲ್ಲಾ ಬುದ್ಧಿವಂತರು ರಾಜ್ಯಸಭೆಯಲ್ಲಿ ಇರುವುದು ಎಂದು ಭಾವಿಸಿರುವಂತಿದೆ ಎಂದ ಮೊಯ್ಲಿ, ನಾವು ಜಂಟಿ ಆಯ್ಕೆ ಸಮಿತಿ ರಚಿಸಲು ಹೇಳಿದಾಗ ನೀವು ಅದನ್ನು ತಿರಸ್ಕರಿಸಿದಿರಿ.ನೀವು ನಮ್ಮ ಮಾತನ್ನು ಕೇಳಿದ್ದರೆ, ಮಸೂದೆ ಬಗ್ಗೆ ಇದ್ದ ಭಿನ್ನಾಭಿಪ್ರಾಯಗಳನ್ನು ಮೊದಲೇ ಬಗೆಹರಿಸಬಹುದಿತ್ತು. ಪ್ರಜಾಪ್ರಭುತ್ವವೆಂದರೆ ಕೇವಲ ಬಹುಮತವೆಂದಲ್ಲ, ಒಮ್ಮತದ ವಿಕಾಸ ಎಂದರು.
ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಬಹುಮತ ಹೊಂದಿದ್ದು, ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆ ಕಡಿಮೆಯಿದೆ. ಎಡಿಎಂಕೆ ಬಿಟ್ಟರೆ ಉಳಿದೆಲ್ಲಾ ಪಕ್ಷಗಳು ಜಿಎಸ್ ಟಿಗೆ ಬೆಂಬಲ ನೀಡಿದ್ದವು. ಹಿರಿಯ ಕಾಂಗ್ರೆಸ್ ನಾಯಕ ಮೊಯ್ಲಿಯವರ ಆರೋಪಕ್ಕೆ ನಂತರ ಪ್ರಧಾನಿ ಉತ್ತರಿಸಿದರು. ''ನಾನು ಮಾತುಕತೆ ನಡೆಸುವಾಗ, ಲೋಕಸಭೆ ಮತ್ತು ರಾಜ್ಯಸಭೆಗಳನ್ನು ಪ್ರತಿನಿಧಿಸುವ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರನ್ನು ಕರೆದಿದ್ದೆ. ಜಿಎಸ್ಟಿ ಮಸೂದೆ ಒಂದು ಭಾರತ ತಂಡದ ಮಸೂದೆ ಎಂದು ಹೇಳಿದರು.