ದೇಶ

ನ್ಯಾಯಾಧೀಶರ ನೇಮಕ ಕುರಿತು ಭಾಷಣದಲ್ಲಿ ಪ್ರಸ್ತಾಪಿಸದ ಪ್ರಧಾನಿ ಮೋದಿ: ಮುಖ್ಯ ನ್ಯಾಯಮೂರ್ತಿ ಬೇಸರ

Sumana Upadhyaya
ನವದೆಹಲಿ: 70ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಲಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಪಟ್ಟಂತೆ ಪ್ರಧಾನಿಯವರು ಕೆಲವು ವಿಷಯಗಳನ್ನು ಹೇಳುತ್ತಾರೆಂದು ತಾನು ನಿರೀಕ್ಷಿಸಿದ್ದೆ ಎಂದು ಹೇಳಿದ್ದಾರೆ.
''ನನ್ನ ವೃತ್ತಿ ಜೀವನದ ಶಿಖರವನ್ನು ತಲುಪಿದ್ದೇನೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನನಗನಿಸಿದ್ದನ್ನು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ನಿಮ್ಮ ಹೃದಯಕ್ಕೆ ನಾಟುವ ಸತ್ಯವನ್ನು ನಾನು ಹೇಳಬೇಕಾಗಿದೆ. ನಾವು ಪ್ರಧಾನ ಮಂತ್ರಿಯವರ, ಕಾನೂನು ಸಚಿವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣಗಳನ್ನು ಕೇಳಿದೆವು.ನ್ಯಾಯಾಂಗ ಮತ್ತು ನ್ಯಾಯಾಧೀಶರ ನೇಮಕಕ್ಕೆ ಸಂಬಂಧಪಟ್ಟಂತೆ ಅವರಿಂದ ಸ್ವಲ್ಪ ನಿರೀಕ್ಷೆಗಳನ್ನಿಟ್ಟುಕೊಂಡಿದ್ದೆ ಎಂದರು.
ಬ್ರಿಟಿಷರ ಆಡಳಿತಾವಧಿಯಲ್ಲಿ ಕೇಸು ವಿಚಾರಣೆ ನಡೆದು 10 ವರ್ಷದೊಳಗೆ ನಿರ್ಣಯವಾಗುತ್ತಿತ್ತು. ಅದು ಕೂಡ ಇಂದು ಆಗುತ್ತಿಲ್ಲ.ಕೇಸುಗಳ ಸಂಖ್ಯೆ ಮತ್ತು ಜನರ ನಿರೀಕ್ಷೆಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ, ಉದ್ದೇಶಗಳನ್ನು ಈಡೇರಿಸುವುದು, ಗುರಿ ತಲುಪುವುದು ಕಷ್ಟವಾಗುತ್ತಿದೆ. ಆ ನಿಟ್ಟಿನಲ್ಲಿ ಈ ಕುರಿತಂತೆ ವಿಶೇಷ ಗಮನಹರಿಸುವಂತೆ ಪ್ರಧಾನ ಮಂತ್ರಿಯವರನ್ನು ಮನವಿ ಮಾಡಿದ್ದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಅವರು ಇತ್ತೀಚೆಗೆ ಸಮಾರಂಭವೊಂದರಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆ, ನ್ಯಾಯಾಧೀಶರ ವಿಷಯವಾಗಿ ಪ್ರಧಾನಿಯವರಿಗೆ ಭಾವನಾತ್ಮಕ ಮನವಿ ಮಾಡಿದ್ದರು.
70ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ, ಇಂದು ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದು, ನಿರುದ್ಯೋಗ ಮತ್ತು ಶೋಷಣೆಯಿಂದ ಮುಕ್ತಿ ಹೊಂದುವುದೇ ನಿಜವಾದ ಸ್ವಾತಂತ್ರ್ಯ ಎಂದು ಹೇಳಿದರು.
ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಯೋಧರಿಗೆ ನಾವು ಶ್ರದ್ಧಾಂಜಲಿ ಸಲ್ಲಿಸುವಾಗ ಅವರ ತತ್ವ, ಆದರ್ಶಗಳಿಗೆ ಅನುಗುಣವಾಗಿ ನಾವು ಎಷ್ಟರ ಮಟ್ಟಿಗೆ ಬದುಕಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಟಿ.ಎಸ್.ಠಾಕೂರ್ ಹೇಳಿದರು.  
SCROLL FOR NEXT