ನವದೆಹಲಿ: ಬೃಹತ್ ಪ್ರಮಾಣದ ನಗದು ಭ್ರಷ್ಟಾಚಾರಕ್ಕೆ ಮೂಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಗದು ರಹಿತ ವಹಿವಾಟುಗಳನ್ನು ಹೆಚ್ಚಿಸುವಂತೆ ಜನತೆಗೆ ಕರೆ ನೀಡಿದ್ದಾರೆ.
ನಗದು ರಹಿತ ವಹಿವಾಟುಗಳತ್ತ ಜನತೆ ಬದಲಾವಣೆಯನ್ನು ಮುನ್ನಡೆಸಬೇಕು, 21 ನೇ ಶತಮಾನದಲ್ಲಿ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಜಾಗ ಇಲ್ಲದಂತಾಗಬೇಕು, ಭ್ರಷ್ಟಾಚಾರ ಬೆಳವಣಿಗೆಗೆ ಮಾರಕವಾಗಿದ್ದು, ಬಡವರ, ಮಧ್ಯಮವರ್ಗದವರ ಕನಸುಗಳ ವಿರುದ್ಧವಾಗಿದೆ ಎಂದು ಲಿಂಕ್ಡ್ ಡಾಟ್ ಕಾಮ್ ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನ.8 ರಂದು ಪ್ರಕಟಿಸಿದ ನೋಟು ನಿಷೇಧ ನಿರ್ಧಾರವನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ ನಗದು ರೂಪದಲ್ಲಿರುವ ಹಣ ಕಪ್ಪುಹಣ ಹಾಗೂ ಭ್ರಷ್ಟಾಚಾರಕ್ಕೆ ಮೂಲವಾಗಿದೆ, ಆದ್ದರಿಂದ ಜನರು ನಗದು ರಹಿತ ವಹಿವಾಟುಗಳತ್ತ ಜನತೆ ಬದಲಾವಣೆಯನ್ನು ಮುನ್ನಡೆಸಬೇಕು, ನಗದು ರಹಿತ ವಹಿವಾಟುಗಳು ಯಶಸ್ವಿಯಾದಲ್ಲಿ ಅದು ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಅಡಿಪಾಯವಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ನಾವು ಮೊಬೈಲ್ ಬ್ಯಾಂಕಿಂಗ್ ಹಾಗೂ ಮೊಬೈಲ್ ವಾಲೆಟ್ ಗಳ ಯುಗದಲ್ಲಿ ಬದುಕುತ್ತಿದ್ದೇವೆ, ಆಹಾರದ ಆರ್ಡರಿಂದ ಹಿಡಿದು ಫರ್ನೀಚರ್, ಟ್ಯಾಕ್ಸಿ ವರೆಗೂ ಎಲ್ಲವೂ ಮೊಬೈಲ್ ನಿಂದಲೇ ಸಾಧ್ಯವಾಗುತ್ತಿದೆ. ದೇಶದ ಜನತೆ ಡೆಬಿಟ್ ಕಾರ್ಡ್ ಹಾಗೂ ಇ-ವಾಲೆಟ್ ಗಳನ್ನು ನಿರಂತರವಾಗಿ ಬಳಸುತ್ತಿದ್ದೀರಿ ಎಂದು ತಿಳಿದಿದೆ. ಆದರೆ ಅದನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ನಗದು ರಹಿತ ವಹಿವಾಟುಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.