ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ ಒಂದು ತಿಂಗಳ ನಂತರ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿದ್ದು, ಈ ಸಂಬಂಧ ಗುರುವಾರ 11 ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ನೋಟ್ ನಿಷೇಧ ಮಾಡಿ ಒಂದು ತಿಂಗಳಾಗಿದ್ದು, ಈಗ ನಗದು ರಹಿತ ಹಾಗೂ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುವ ಅವಶ್ಯಕತೆ ಇದೆ ಎಂದರು.
ನೋಟ್ ನಿಷೇಧದ ನಂತರ ಕಾರ್ಡ್ ಬಳಸಿ ಶೇ.40ರಷ್ಟು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲಾಗಿದೆ. ಹೀಗಾಗಿ ಇದಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಲು ಕಾರ್ಡ್ ಬಳಸಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಿದರೆ ಶೇ.075ರಷ್ಟು ರಿಯಾಯ್ತಿ ಹಾಗೂ ಇ-ಪೇಮೆಂಟ್ ಮೂಲಕ ರೈಲ್ವೆ ಟಿಕೆಟ್ ಖರೀದಿಸಿದರೆ ಶೇ.05ರಷ್ಟು ರಿಯಾಯ್ತಿ ಜೊತೆಗೆ 10 ಲಕ್ಷ ರುಪಾಯಿ ಮೌಲ್ಯದ ವಿಮೆ ನೀಡಲು ನಿರ್ಧರಿಸಲಾಗಿದ್ದು, ಇದು ಜನವರಿ 1, 2017ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಮಾರ್ಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ಶೇ.10ರಷ್ಟು ರಿಯಾಯ್ತಿ ನೀಡುವುದಾಗಿ ಹಾಗೂ 2000 ರುಪಾಯಿವರೆಗಿನ ನಗದು ರಹಿತ ವ್ಯವಹಾರಕ್ಕೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ.
ಡಿಜಿಟಲ್ ಮೂಲಕ ಪಾವತಿಸಲಾಗುವ ಸಾಮಾನ್ಯ ವಿಮೆಗೆ ಶೇ.10ರಷ್ಟು ಹಾಗೂ ಜೀವ ವಿಮೆಗೆ ಶೇ.8ರಷ್ಟು ರಿಯಾಯ್ತಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ 4.32 ಕೋಟಿ ಗ್ರಾಮಸ್ಥರಿಗೆ ನಬಾರ್ಡ್ ಮೂಲಕ ರುಪೇ ಕಾರ್ಡ್ ಗಳನ್ನು ವಿತರಿಸಲಾಗುವುದು ಎಂದು ಜೇಟ್ಲಿ ತಿಳಿಸಿದ್ದಾರೆ.
10 ಸಾವಿರಕ್ಕಿಂತ ಹೆಚ್ಚು ಜನರಿರುವ ಪ್ರತಿ ಗ್ರಾಮಕ್ಕೆ ಎರಡು ಪಿಒಎಸ್(ಪಾಯಿಂಟ್ ಆಫ್ ಸೇಲ್ ಮಷಿನ್ ಗಳು)ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos