ನವದೆಹಲಿ: ಕೋರ್ಟ್ ನಲ್ಲಿ ರಾಜಕೀಯ ಚಟುವಟಿಕೆಗಾಗಿ ನಿಮಗೆ ಬಿಜೆಪಿ ಹಣ ಕೊಡುತ್ತಾ?: ಪಿಐಎಲ್ ಅರ್ಜಿದಾರನಿಗೆ ಸುಪ್ರೀಂ ಪ್ರಶ್ನೆ
ಸರಣಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗಳನ್ನು ಸಲ್ಲಿಸುತ್ತಿದ್ದ ಬಿಜೆಪಿ ವಕ್ತಾರನ ಕ್ರಮಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಕೋರ್ಟ್ ನಲ್ಲಿ ರಾಜಕೀಯ ಚಟುವಟಿಕೆ ನಡೆಸಲು ಬಿಜೆಪಿ ನಿಮಗೆ ಪಾವತಿ ಮಾಡುತ್ತಿದೆಯೇ ಎಂದು ಪ್ರಶ್ನಿಸಿದೆ.
ಬಿಜೆಪಿ ವಕ್ತಾರ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸುತ್ತಿದ್ದ ವೇಳೆ ಸುಪ್ರೀಂ ಕೋರ್ಟ್ ಈ ಪ್ರಶ್ನೆ ಕೇಳಿದ್ದು, ನೀವು ವೃತ್ತಿಪರ ಪಿಐಎಲ್ ಕಾರ್ಯಕರ್ತರಾಗಿದ್ದೀರಿ, ಪ್ರತಿದಿನವೂ ಒಂದಲ್ಲಾ ಒಂದು ಪಿಐಎಲ್ ಸಲ್ಲಿಸುತ್ತಿದ್ದೀರಿ. ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ನಿಮ್ಮದೇ ಪಕ್ಷವಾದ್ದರಿಂದ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ನೀವೇಕೆ ಸರ್ಕಾರವನ್ನೇ ಕೇಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಲಯಗಳಲ್ಲಿ ರಾಜಕೀಯ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ರಾಜಕೀಯ ಉದ್ದೇಶಗಳಿಗೆ ಕೋರ್ಟ್ ನ್ನು ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ಪಿಐಎಲ್ ನ್ನು ವಜಾಗೊಳಿಸಿದೆ. ಕಳೆದ ವರ್ಷ ಇಂಥದ್ದೇ ಅಭಿಪ್ರಾಯ ಪ್ರಕಟಿಸಿದ್ದ ಮುಂಬೈ ನ ಹೈಕೋರ್ಟ್, ಬಹುತೇಕ ಪಿಐಎಲ್ ಗಳು ನೈಜ ಕಾರಣ, ಉದ್ದೇಶ ಹೊಂದಿರುವುದಿಲ್ಲ ಎಂದು ಹೇಳಿತ್ತು.