ನವದೆಹಲಿ: ಜಮ್ಮು ಕಾಶ್ಮೀರದ ಸಿಯಾಚಿನ್ ನಲ್ಲಿ ಮೃತಪಟ್ಟಿದ್ದ ಕರ್ನಾಟಕದ ಮತ್ತೊಬ್ಬ ಯೋಧ ಟಿಟಿ ನಾಗೇಶ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಸೇನಾ ಅಧಿಕಾರಿಗಳು ಯೋಧನ ಕುಟುಂಟ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
38 ವರ್ಷದ ಟಿಟಿ ನಾಗೇಶ್ ಅವರ ಮೃತದೇಹ ಹಾಸನಕ್ಕೆ ಫೆ.11ರಂದು ಬೆಳಗ್ಗೆ 11ಕ್ಕೆ ತರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ಎಂದು ತಿಳಿದು ಬಂದಿದೆ.
ಮದ್ರಾಸ್ ರೆಜಿರ್ಮೆಂಟ್ ಸುಬೇದಾರ್ ಟಿಟಿ ನಾಗೇಶ್ ಅವರು ಜಮ್ಮು ಕಾಶ್ಮೀರದ ರಿಯಾಚಿನ್ ನ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟಿದ್ದರು. ಅವರ ಪಾರ್ಥೀವ ಶರೀರವನ್ನು ದೆಹಲಿಗೆ ತಂದು ನಂತರ ಹಾಸನಕ್ಕೆ ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕಳೆದ 20 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹಾಸನ ಜಿಲ್ಲೆ ತೇಜೂರಿನ ಸುಬೇದಾರ್ ಟಿಟಿ ನಾಗೇಶ್ ನಿವೃತ್ತಿ ಹೊಂದುವ ಹಂತದಲ್ಲಿದ್ದರು. ಇವರ ಪತ್ನಿ ಆಶಾ ಹಾಗೂ ಇಬ್ಬರು ಮಕ್ಕಳು ಹಾಸನ ನಗರಕ್ಕೆ ಹೊಂದಿಕೊಂಡ ಪುಟ್ಟಹಳ್ಳಿ ತೇಜೂರಿನಲ್ಲಿ ವಾಸವಾಗಿದ್ದಾರೆ.