ದೇಶ

ಮಗಳ ಸಹಪಾಠಿಯನ್ನು ಕೊಂದ ಶಿಕ್ಷಕಿ ಬಂಧನ

Sumana Upadhyaya

ರಾಂಚಿ: ಶಿಕ್ಷಕ ಎಂದರೆ ಸರಿ-ತಪ್ಪುಗಳನ್ನು ತಿಳಿದವನು, ಉತ್ತಮವಾದುದನ್ನು ಬೋಧಿಸುವವನು ಎಂದರ್ಥ. ತಪ್ಪು ದಾರಿಯಲ್ಲಿ ನಡೆಯುವವರಿಗೆ ಬುದ್ದಿ ಹೇಳಿ ಸರಿದಾರಿಗೆ ಕೊಂಡೊಯ್ಯುವವನು ಎಂದರ್ಥ. ಆದರೆ ಇಲ್ಲಿ ಶಿಕ್ಷಕಿಯೇ ಭಕ್ಷಕರಾಗಿದ್ದಾರೆ.

ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮಗಳ ಸಹಪಾಠಿಯನ್ನು ಕೊಂದು ಹಾಕಿದ್ದಾರೆ. ಸಫೈರ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಜ್ಮಾ ಖತೂನ್ ಹಿಂದಿ ಶಿಕ್ಷಕಿಯಾಗಿದ್ದಾರೆ. ಇವರ ಮಗಳು ಹಂನ್ಸಾ ಏಳನೇ ತರಗತಿಯಲ್ಲಿ ಓದುತ್ತಿದ್ದು, ಅವಳ ಸಹಪಾಠಿ ವಿನಯ್ ಮಹ್ತೊನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.

ಆಗಿದ್ದೇನು?: ಹಂನ್ಸಾ ಮತ್ತು ವಿನಯ್ ಒಂದೇ ತರಗತಿಯವರಾಗಿದ್ದು, ಪರಸ್ಪರ ಪ್ರೀತಿಸುತ್ತಿ ದ್ದರು ಎನ್ನಲಾಗಿದೆ. ಆದರೆ ನಜ್ಮಾ ಅವರಿಗೆ ತಮ್ಮ ಮಗಳು ವಿನಯ್ ನೊಂದಿಗೆ ಸ್ನೇಹ ಸಂಬಂಧ ಹೊಂದಿರುವುದು ಇಷ್ಟವಿರಲಿಲ್ಲ. ಶುಕ್ರವಾರ ಮಧ್ಯರಾತ್ರಿ ಹೊತ್ತಿನಲ್ಲಿ ವಿನಯ್ ಹಂನ್ಸಾಳನ್ನು ಭೇಟಿ ಮಾಡಲು ಅವಳ ಮನೆಗೆ ಹೋಗಿದ್ದಾನೆ. ಶಿಕ್ಷಕರ ಹಾಸ್ಟೆಲ್ ದಾಟಿ ವಿನಯ್ ಹೋಗುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಸ್ವಲ್ಪ ಹೊತ್ತು ಕಳೆದ ನಂತರ ಹಾಸ್ಟೆಲ್ ನ ಮುಖ್ಯ ದ್ವಾರದಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ವಿನಯ್ ಹೊರಬಂದಿದ್ದಾನೆ. ನಂತರ ಅವನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ರಾಂಚಿ ಪೊಲೀಸರು ಶಿಕ್ಷಕಿ ನಜಿಯಾ, ಆಕೆಯ ಪತಿ ಮತ್ತು ಮಕ್ಕಳನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

ವಿನಯ್ ನ ಶವ ಕಳೆದ ಶುಕ್ರವಾರ ಸಫೈರ್ ಇಂಟರ್ ನ್ಯಾಶನಲ್ ಶಾಲೆಯ ಶಿಕ್ಷಕರ ಕ್ವಾರ್ಟರ್ಸ್ ಹೊರಗೆ ಕಾಣಸಿಕ್ಕಿದೆ. ಇದೇ ಕ್ವಾರ್ಟರ್ಸ್ ನಲ್ಲಿ ನಜ್ಮಾ ಖತೂನ್ ಮತ್ತು ಆಕೆಯ ಪತಿ ಹಾಗೂ ಇಬ್ಬರು ಮಕ್ಕಳು ವಾಸವಾಗಿದ್ದಾರೆ.


SCROLL FOR NEXT