ಮೇಕ್ ಇನ್ ಇಂಡಿಯಾ ಸಪ್ತಾಹದಲ್ಲಿ ಅಗ್ನಿ ಅವಘಡ: ತನಿಖೆಗೆ ಆದೇಶಿಸಿದೆ ಫಡ್ನವೀಸ್
ಮುಂಬೈ: ಬಹುನಿರೀಕ್ಷಿತ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಮಗು ಮೇಕ್ ಇನ್ ಇಂಡಿಯಾ ಸಪ್ರಾಹದಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತನಿಖೆಗೆ ಆದೇಶಿಸಿದ್ದಾರೆ.
ಮುಂಬೈನ ಬಾಂದ್ರಾ-ಕುರ್ಲಾದ ಎಂಎಂಆರ್ಡಿಎ ಮೈದಾನದಲ್ಲಿ ನಡೆಯುತ್ತಿದ್ದ ಮೇಕ್ ಇನ್ ಇಂಡಿಯಾ ಸಪ್ತಾಹ ಸಮಾರಂಭದ ಹಿನ್ನೆಲೆ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಸ್ಟೇಜ್ ಮೇಲೆ ಕಲಾವಿದರು ನೃತ್ಯ ಪ್ರದರ್ಶನ ಮಾಡುತ್ತಿದ್ದ ವೇಳೆ ಸ್ಟೇಜ್ ಕೆಳಗೆ ಬೆಂಕಿ ಕಾಣಿಸಿಕೊಂಡಿತ್ತು. ವೇದಿಕೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತಲ್ಲದೆ, ಬೆಂಕಿ ನಂದಿಸಲು 20 ಅಗ್ನಿ ಶಾಮಕ ವಾಹನಗಳು
ಕಾರ್ಯನಿರ್ವಹಿಸಿ ಯಶಸ್ವಿಯಾಗಿವೆ.
ಇದೀಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಕಾರ್ಯಕ್ರಮದಲ್ಲಿ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು. ಎಲ್ಲಾ ರೀತಿಯ ಕಾರ್ಯವಿಧಾನಗಳನ್ನು, ತಪಾಸಣೆಗಳನ್ನು ಮಾಡಲಾಗಿತ್ತು. ಘಟನೆ ನಿಜಕ್ಕೂ ದುರದೃಷ್ಟಕರ. ಘಟನೆಯಲ್ಲಿ ಯಾವುದೇ ಗಾಯವಾಗಲಿ, ಪ್ರಾಣಪಾಯಗಳಾಗಲಿ ಸಂಭವಿಸಿಲ್ಲ. ಬೆಂಕಿ ಇದೀಗ ನಿಯಂತ್ರಣಕ್ಕೆ ಬಂದಿದ್ದು, ಘಟನೆಗೆ ಸಂಬಂಧ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ. ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ ಅಗ್ನಿ ಅವಘಡ ಸಂಭವಿಸುವಾಗ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅವರ ಪತ್ನಿ ಅಮೃತ ಫಡ್ನವೀಸ್, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಅಮಿರ್ ಖಾನ್, ಮಹಾರಾಷ್ಟ್ರ ಗವರ್ನರ್ ಸಿ.ವಿದ್ಯಾಸಾಗರ್ ರಾವ್ ಇದ್ದರು ಎಂದು ಹೇಳಲಾಗುತ್ತಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಭದ್ರತಾಧಿಕಾರಿಗಳು ಸ್ಟೇಜ್ ಮೇಲಿದ್ದ ವಿಐಪಿಗಳು ಹಾಗೂ ಕಲಾವಿದರನ್ನೆಲ್ಲರನ್ನು ಕೆಳಗಿಳಿಸಿದ್ದರು.
ಘಟನೆ ನಡೆಯುವ ವೇಳೆ ಸ್ಥಳದಲ್ಲಿ ಕೆಲವು ಗಂಟೆಗಳ ಕಾಲ ಉದ್ವಿಗ್ನ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಬೆಂಕಿಯನ್ನು ಕಾಣುತ್ತಿದ್ದಂತೆ ಸ್ಥಳದಲ್ಲಿದ್ದವರೆಲ್ಲಾ ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದರು. ಕೆಲವರು ಜನರನ್ನು ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದರು. ನಂತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದರು.
ಘಟನೆ ಸಂಭವಿಸುವಾಗ ನಟಿ ಹಾಗೂ ಬಿಜೆಪಿ ನಾಯಕಿ ಹೇಮಾ ಮಾಲಿನಿ ಕೂಡ ಇದ್ದರು. ಈ ಕುರಿತಂತೆ ಮಾತನಾಡಿರುವ ಅವರು, ನಾನು ಚೆನ್ನಾಗಿದ್ದೇನೆ, ಸುರಕ್ಷಿತವಾಗಿದ್ದೇನೆ. ಘಟನೆ ವೇಳೆ ಕೆಲವು ಕಲಾವಿದರು ಜಾನಪದ ನೃತ್ಯವನ್ನು ಪ್ರದರ್ಶಿಸುತ್ತಿದ್ದರು. ಘಟನೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ನಿಯೋಜಿಸಲಾಗಿದ್ದ ಕ್ಯಾಮರಾಗಳಲ್ಲಿ ಘಟನೆಯ ದೃಶ್ಯಗಳು ಸೆರೆಯಾಗಿದ್ದು, ದೃಶ್ಯದಲ್ಲಿ ವೇದಿಕೆಯ ಕೆಳಗೆ ಬೆಂಕಿ ಕಾಣಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಘಟನೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಅಗ್ನಿ ಅವಘಡ ಕುರಿತಂತೆ ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಸೂಕ್ತ ರೀತಿಯ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos