ಪ್ರತಿಭಟನಾಕಾರರು ಟಯರ್ಗೆ ಬೆಂಕಿ ಹಚ್ಚಿರುವುದು
ಚಂಡೀಗಢ್: ಸರ್ಕಾರಿ ಕೆಲಸ ಮತ್ತು ಶೈಕ್ಷಣಿಕ ಕೇಂದ್ರಗಳಲ್ಲಿ ಮೀಸಲಾತಿಗೆ ಬೇಡಿಕೆಯೊಡ್ಡಿ ಹರ್ಯಾಣದಲ್ಲಿ ಜಾಟ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆಕಾರರನ್ನು ನಿಯಂತ್ರಿಸಲು ಪೊಲೀಸರಿಗೆ ಅಸಾಧ್ಯವಾದಾಗ ಭಾರತೀಯ ಸೇನೆಯನ್ನು ಕರೆಯಲಾಯಿತು. ರೋಹ್ತಕ್ ಹರ್ಯಾಣದ ವಿತ್ತ ಸಚಿವ ಅಭಿಮನ್ಯು ಅವರ ವಸತಿ ಮುಂದೆ ಪ್ರತಿಭಟನೆ ನಡೆದಿದ್ದು, ಜನರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಗುಂಡು ಹಾರಾಟದಲ್ಲಿ ಮೂವರು ಸಾವನ್ನಪ್ಪಿದ್ದು, 25 ಮಂದಿಗೆ ತೀವ್ರ ಗಾಯಗಳಾಗಿವೆ.
ಪ್ರತಿಭಟನಾನಿರತರು ಸಚಿವರ ಕಾರಿಗೆ ಕಿಚ್ಚಿಟ್ಟಿದ್ದು, ಇದೀಗ ದೆಹಲಿಯ ಸಮೀಪದಲ್ಲಿರುವ ಫರೀದಾಬಾದ್ಗೂ ಪ್ರತಿಭಟನೆ ವ್ಯಾಪಿಸಿದೆ. ರೋಹ್ತಕ್, ಬಿವಾನಿ ಮೊದಲಾದ ಸ್ಥಳಗಳಲ್ಲಿ ಪ್ರತಿಭಟನೆಯ ಕಿಚ್ಚು ತೀವ್ರವಾಗಿದ್ದರಿಂದ ಅಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಈ ಪ್ರದೇಶಗಳಲ್ಲಿ ಎಸ್ಸೆಮ್ಮೆಸ್ಸ್, ಇಂಟರ್ನೆಟ್ ಸೇವೆಗಳನ್ನು ಸರ್ಕಾರ ಅನಿಶ್ಚಿತ ಕಾಲದ ವರಗೆ ನಿಷೇಧಿಸಿದೆ.
ಈ ಪ್ರತಿಭಟನೆಯನ್ನು ನಿಯಂತ್ರಿಸಲು ಅರೆ ಸೈನಿಕ ದಳವನ್ನು ಕಳುಹಿಸಿಕೊಡಿ ಎಂದು ಹರ್ಯಾಣ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಇದೀಗ ರೋಹ್ಟಕ್
ತಮ್ಮನ್ನು ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿಸುವ ವರೆಗೆ ತಾವು ಈ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಜಾಟ್ ಸಮುದಾಯದ ಈ ಪ್ರತಿಭಟನೆಯಿಂದಾಗಿ ರೈಲು, ಸಾರಿಗೆ ಸಂಚಾರ ಸ್ಥಗಿತಗೊಂಡಿದೆ.
ಹರ್ಯಾಣ ದಾರಿಯಾಗಿ ಹಾದುಹೋಗುವ ಎಲ್ಲ ರೈಲುಗಳನ್ನು ಉತ್ತರ ರೈಲ್ವೇ ರದ್ದು ಮಾಡಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಟಯರ್ಗಳನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ರಸ್ತೆ ಸಂಚಾರ ಸ್ಥಗಿತಗೊಂಡಿರುವ ಕಾರಣ ಹಾಲು, ಹಣ್ಣು ಮತ್ತು ತರಕಾರಿ ವಹಿವಾಟು ನಿಂತು ಹೋಗಿದೆ.
ಆದಾಗ್ಯೂ, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹರ್ಯಾಣದ ಬಿಜೆಪಿ ಸರ್ಕಾರ ಪ್ರತಿಭಟನಾಕಾರರಿಗೆ ಮುನ್ನೆಚ್ಚರಿಕೆ ನೀಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos