ಹೈದರಾಬಾದ್: ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ದಲಿತನೇ ಆಗಿರಲಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರ ಹೇಳಿದ್ದಾರೆ.
ದಲಿತ ವಿದ್ಯಾರ್ಥಿ ಸಾವು ಕುರಿತಂತೆ ಮಹಾರಾಷ್ಟ್ರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣ ಸಂಬಂಧ ನನಗೆ ಗೊತ್ತಿರುವ ಹಾಗೂ ಬಂದಿರುವ ಮಾಹಿತಿಯ ಪ್ರಕಾರ ರೋಹಿಲ್ ದಲಿತ ಸಮುದಾಯಕ್ಕೆ ಸೇರಿದವನಲ್ಲ. ಅವನು ದಲಿತ ಸಮುದಾಯಕ್ಕೆ ಸೇರಿದವನೆಂದು ಹೇಳಲಾಗುತ್ತಿದೆಯಷ್ಟೇ. ಕೆಲವು ವ್ಯಕ್ತಿಗಳು ಪ್ರಕರಣವನ್ನು ಸುಖಾಸುಮ್ಮನೆ ಸಮುದಾಯ ಗಲಭೆಯಾಗಿ ಮಾರ್ಪಾಡು ಮಾಡುವ ಯತ್ನ ನಡೆಸುತ್ತಿದ್ದಾರೆ. ಘಟನೆಯನ್ನು ಜಾತಿ ಗಲಭೆಯಾಗಿ ಮಾರ್ಪಾಡು ಮಾಡುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ನಡೆದ ಘರ್ಷಣೆಯೊಂದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ರೋಹಿತ್ ಸೇರಿದಂತೆ ಮತ್ತೈವರು ವಿದ್ಯಾರ್ಥಿಗಳನ್ನು 2015ರ ಆಗಸ್ಟ್ ತಿಂಗಳಿನಲ್ಲಿ ವಿವಿಯಿಂದ ಅಮಾನತು ಮಾಡಿದ್ದರು. ಇದರಿಂದ ನೊಂದಿದ್ದ ರೋಹಿತ್ ಆತ್ಮಹತ್ಯೆಗೆ ಶರಣಾಗಿದ್ದ. ಈ ಪ್ರಕರಣವೀಗ ರಾಜಕೀಯ ವಲಯದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದೆ.