ಲಖನೌ: ಇದೊಂದು ಆಘಾತಕಾರಿ ಹೇಳಿಕೆ ಅಂತ ಹೇಳಬಹುದು. ಉತ್ತರ ಪ್ರದೇಶ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಉಪಾಧ್ಯಕ್ಷ ದಯಾಶಂಕರ ಸಿಂಗ್ ಅವರು ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಸಿಂಗ್, ಒಬ್ಬ ವೇಶ್ಯೆ ಹಣ ನೀಡಿದರೆ ತನ್ನ ಬದ್ಧತೆಯನ್ನು ಈಡೇರಿಸುತ್ತಾಳೆ. ಆದರೆ ಮಾಯಾವತಿ ಹಾಗಲ್ಲ. ಯಾರೂ ಹೆಚ್ಚಿಗೆ ಹಣ ನೀಡುತ್ತಾರೋ ಅವರಿಗೆ ಟಿಕೆಟ್ ನೀಡುತ್ತಾರೆ. ಹೀಗಾಗಿ ಅವರು ಒಬ್ಬ ವೇಶ್ಯೆಗಿಂತಲೂ ಕಡೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಾಯಾವತಿ ಅವರು ಟಿಕೆಟ್ಗಳನ್ನು ಮಾರುತ್ತಿದ್ದಾರೆ… ಅವರು ಎಷ್ಟು ದೊಡ್ಡ ನಾಯಕಿ ಎಂದರೆ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರು… ಆದರೆ ಅವರು 1 ಕೋಟಿ ರುಪಾಯಿಗಳನ್ನು ತಮಗೆ ಕೊಡುವ ಯಾರಿಗೆ ಬೇಕಾದರೂ (ಸ್ಪರ್ಧಿಸಲು) ಟಿಕೆಟ್ ಕೊಡುತ್ತಾರೆ. ಯಾರಾದರೂ 2 ಕೋಟಿ ರುಪಾಯಿ ಜೊತೆಗೆ ಬಂದರೆ ಮಾಯಾವತಿ ಅವರಿಗೆ ಟಿಕೆಟ್ ಕೊಡುತ್ತಾರೆ. ಯಾರಾದರೂ 3 ಕೋಟಿ ರುಪಾಯಿ ಕೊಟ್ಟರೆ ಅವರು ಹಿಂದಿನ ಅಭ್ಯರ್ಥಿಗಳಿಗೆ ಕೊಟ್ಟ ಟಿಕೆಟ್ ರದ್ದು ಪಡಿಸಿ ಮೂರನೇವರನ್ನು ಆಯ್ಕೆ ಮಾಡುತ್ತಾರೆ. ಈಗ ಅವರ ವ್ಯಕ್ತಿತ್ವ ವೇಶ್ಯೆಗಿಂತಲೂ ನಿಕೃಷ್ಟವಾಗಿದೆ ಎಂದು ಬಿಜೆಪಿ ನಾಯಕ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಸಿಂಗ್ ಭಾಷಣದ ವಿಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆಪ್ನ ಅಶುತೋಷ್ ಅವರು, ಬಿಜೆಪಿ ದಲಿತ ವಿರೋಧಿ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷ್ಯ ಬೇಕೆ? ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos