ನವದೆಹಲಿ: ಸಂಸತ್ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ಸಂಸತ್ ಕಲಾಪದಲ್ಲಿ ಭಾಗವಹಿಸಂದತೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸೂಚನೆ ನೀಡಿದ್ದಾರೆ.
ನಿಯಮ ಉಲ್ಲಂಘಿಸಿರುವ ಪ್ರಕರಣದ ಕುರಿತು ನೇಮಿಸಲಾಗಿರುವ ಸಮಿತಿಯ ತನಿಖೆ ಮುಕ್ತಾಯಗೊಳ್ಳುವವರೆಗೂ ಸಂಸತ್ ಅಧಿವೇಶನದಲ್ಲಿ ಭಾಗವಹಿಸದಂತೆ ಸುಮಿತ್ರಾ ಮಹಾಜನ್ ಭಗವಂತ್ ಮಾನ್ ಗೆ ಸೂಚನೆ ನೀಡಿದ್ದಾರೆ. 9 ಸದಸ್ಯರ ಸಮಿತಿ ಆಗಸ್ಟ್ 3 ರಂದು ವರದಿ ಪ್ರಕಟಿಸುವ ನಿರೀಕ್ಷೆ ಇದ್ದು, ಅಲ್ಲಿಯ ವರೆಗೆ ಭಗವಂತ್ ಮಾನ್ ಸಂಸತ್ ಅಧಿವೇಶನದಲ್ಲಿ ಭಾಗವಹಿಸುವಂತಿಲ್ಲ.
ಕಳೆದ ವಾರದ ಸಂಸತ್ ಅಧಿವೇಶನದ್ಲಲಿ ಭಾಗವಹಿಸಿದ್ದ ಭಗವಂತ್ ಮಾನ್, ತಮ್ಮ ನಿವಾಸದಿಂದ ಸಂಸತ್ ಭವನದ ವರೆಗಿನ ಪ್ರಯಾಣವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಸಂಸತ್ ನಲ್ಲಿ ಭದ್ರತೆಯುಳ್ಳ ಪ್ರದೇಶಗಳನ್ನು ಚಿತ್ರೀಕರಿಸಲಾಗಿದ್ದು, ಇದರಿಂದ ಸಂಸತ್ ನ ಭದ್ರತೆಗೆ ಧಕ್ಕೆ ಉಂಟಾಗಲಿದೆ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದರು, ಈ ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ ಭಗವಂತ್ ಮಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿತ್ತು.