ನವದೆಹಲಿ: ಮಥುರಾ ಘರ್ಷಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಥುರಾ ಸಂಸದೆ ಹೇಮಾಮಾಲಿನ ಟ್ವಿಟರ್ ನಲ್ಲಿ ತನ್ನ ಶೂಟಿಂಗ್ ಫೋಟೋಗಳನ್ನು ಅಪ್ ಲೋಡ್ ಮಾಡಿಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ನಟಿ ಹೇಮಾಮಾಲಿನಿ ಟ್ವಿಟರ್ ನಿಂದ ಅಪ್ ಲೋಡ್ ಮಾಡಲಾಗಿದ್ದ ಫೋಟೋಗಳನ್ನು ತೆಗೆದುಹಾಕಿದ್ದಾರೆ.
ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಉದ್ರಿಕ್ತ ಜನರ ಗುಂಪು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸರು ಸೇರಿ 24 ಜನರು ಸಾವನ್ನಪ್ಪಿದ ಘಟನೆ ನಡೆಯುತ್ತಿರುವ ಸಂದರ್ಭದಲ್ಲಿ ತನ್ನ ಶೂಟಿಂಗ್ ಚಿತ್ರಗಳನ್ನು ಅಪ್ ಲೋಡ್ ಮಾಡಿದ್ದಾರೆಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ, ಬಿಜೆಪಿ ಪಕ್ಷದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಸುದ್ದಿ ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಅಪ್ ಲೋಡ್ ಮಾಡಲಾಗಿದ್ದ ಫೋಟೋಗಳನ್ನು ತೆಗೆದು ಹಾಕಿದ್ದಾರೆ.
ನಂತರ ಮಥುರಾ ಘರ್ಷಣೆ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದು, ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಈಗಷ್ಟೇ ಮಥುರಾದಿಂದ ಆಗಮಿಸಿದ್ದೇನೆ. ಅಗತ್ಯ ಬಿದ್ದರೆ ನಾನು ಮಥುರಾಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ. ನನಗೆ ಈಗಷ್ಟೇ ತಿಳಿಯಿತು ಅಲ್ಲಿ ಘರ್ಷಣೆಯಿಂದಾಗಿ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆಂದು. ಸುದ್ದಿ ಕೇಳಿ ತುಂಬಾ ಬೇಸರವಾಗಿದೆ. ನನ್ನ ಅಗತ್ಯ ಬಿದ್ದರೆ ನಾನು ಮತ್ತೆ ಮಥುರಾಗೆ ತೆರಳುವೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಯಿಸಿರುವ ಬಿಜೆಪಿ ಪ್ರಕರಣವನ್ನು ವಿಷಯಾಂತರಗೊಳಿಸದೆ, ಘರ್ಷಣೆ ನಿವಾರಣೆಗೆ ಕ್ರಮ ಕೈಗೊಳ್ಳುವ ಅಗತ್ಯೆ ಇದೆ ಎಂದು ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos