ಬಿಹಾರ: ರಸ್ತೆ ದುರಸ್ತಿಗಾಗಿ ಸಾರ್ವಜನಿಕರಿಂದ ದೂರು ಪಡೆಯಲು ಬಿಹಾರ ಹೊಸ ವ್ಯವಸ್ಥೆಯನ್ನು ಕಂಡುಕೊಂಡಿದ್ದು, ವಾಟ್ಸ್ ಆಪ್ ಮೂಲಕ ಸಾರ್ವಜನಿಕರು ದೂರು ನೀಡುವ ಸೌಲಭ್ಯವನ್ನು ನೀಡಿದೆ.
ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಈ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ಪ್ರತ್ಯೇಕವಾದ ವಾಟ್ಸ್ ಆಪ್ ನಂಬರ್ (9470001346) ನ್ನು ನೀಡಿದ್ದು, ದುರಸ್ತಿಯಾಗಬೇಕಿರುವ ರಸ್ತೆಯ ಫೋಟೋಗಳನ್ನು ಈ ನಂಬರ್ ಗೆ ಕಳಿಸಬಹುದಾಗಿದೆ.
ತೇಜಸ್ವಿ ಯಾದವ್ ಅವರ ಕ್ರಮವನ್ನು ಸ್ವಾಗತಿಸಿರುವ ರಸ್ತೆ ನಿರ್ಮಾಣ ಇಲಾಖೆ ಅಧಿಕಾರಿಗಳು, ಇದು ಜನಸ್ನೇಹಿ ಕ್ರಮ ಎಂದು ಬಣ್ಣಿಸಿದ್ದಾರೆ. ವಾಟ್ಸ್ ಆಪ್ ಮೂಲಕ ದೂರು ನೀಡುವ ಸೌಲಭ್ಯ ಜಾರಿಯಾಗುವುದಕ್ಕೂ ಮುನ್ನ, ಜನರು ಲಿಖಿತ ದೂರನ್ನು ನೀಡಬೇಕಿತ್ತು, ಇದು ಸಂಬಂಧಿಸಿದ ಅಧಿಕಾರಿಗಳನ್ನು ತಲುಪಿ ರಸ್ತೆ ದುರಸ್ತಿಯಾಗುವ ಪ್ರಕ್ರಿಯೆ ವಿಳಂಬವಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಉಪಯುಕ್ತವಾಗುವಂತಹ ಕ್ರಮಗಳನ್ನು ಕೈಗೊಂಡಿರುವುದು ಇದೆ ಮೊದಲಲ್ಲ, ಕಳೆದ ಡಿಸೇಂಬರ್ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನಿಗೆ ಬರಬೇಕಿದ್ದ ವಿದ್ಯಾರ್ಥಿವೇತನವನ್ನು ಕೊಡಿಸಲು ಸಾಮಾಜಿಕ ಜಾಲತಾಣದ ಮೂಲಕ ಸಹಾಯ ಮಾಡಿದ್ದರು.