ಶಿವಸೇನಾ ಮುಖಂಡ ಉದ್ಧವೇ ಠಾಕ್ರೆ
ನವದೆಹಲಿ: ನನ್ನ ಕುತ್ತಿಗೆಗೆ ಚಾಕು ಹಿಡಿದರೂ ಭಾರತ ಮಾತಾ ಕೀ ಜೈ ಎಂಬ ಘೋಷಣೆ ಕೂಗುವುದಿಲ್ಲ ಎಂದು ಹೇಳಿಕೆ ನೀಡಿರುವ ಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಒವೈಸಿಯ ಭಾರತೀಯ ಪೌರತ್ವ ರದ್ದುಗೊಳಿಸಬೇಕು ಎಂದು ಶಿವಸೇನಾ ಆಗ್ರಹಿಸಿದೆ.
ಭಾರತ ಮಾತಾ ಕೀ ಜೈ ಎಂದು ಭಾರತೀಯ ಮುಸ್ಲಿಮರು ಘೋಷಣೆ ಕೂಗಿ ಒವೈಸಿಗೆ ಛೀಮಾರಿ ಹಾಕಿ ಎಂದು ಶಿವಸೇನಾ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಪ್ರಕಟಿಸಿಕೊಂಡಿದೆ.
ಒವೈಸಿ ಈ ರೀತಿ ಹೇಳಿಕೆ ನೀಡುವುದರ ಮೂಲಕ ಭಾರತ ಮಾತೆಗೆ ಅವಮಾನ ಮಾಡಿದ್ದಾರೆ. ಈತನ ಹೇಳಿಕೆಯನ್ನು ಖಂಡಿಸಿ ಇಡೀ ಮುಸ್ಲಿಂ ಜನಾಂಗವೇ ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಒವೈಸಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಬೇಕು ಎಂದು ಶಿವಸೇನಾ ತಿಳಿಸಿದೆ.
ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗದವರ ಭಾರತೀಯ ಪೌರತ್ವ ಹಾಗೂ ಮತದಾನ ಹಕ್ಕನ್ನು ಕಿತ್ತು ಹಾಕಿ ಎಂದು ಹೇಳಿರುವ ಶಿವಸೇನಾ, ಮಧ್ಯಪಾನ ಸೇವಿಸಿದ್ದ ವೇಳೆ ಒವೈಸಿ ಈ ಹೇಳಿಕೆ ನೀಡಿದ್ದಾರೆ ಎಂದು ಕಿಡಿ ಕಾರಿದೆ.
ಇಸ್ಲಾಂ ಧರ್ಮದಲ್ಲಿ ಮಧ್ಯಪಾನ ಅಥವಾ ಮಾದಕ ವ್ಯಸನಗಳಿಗೆ ನಿಷೇಧವಿದೆ. ಆದರೆ, ಒವೈಸಿ ಮಧ್ಯಪಾನ ಸೇವಿಸಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ನಾನು ಭಾರತೀಯನು ಎಂದು ಹೇಳಿಕೊಳ್ಳುವ ಮನೋವಿಕೃತ ಒವೈಸಿ, ಭಾರತ ತಾಯಿಯ ಬೆನ್ನಿಂದೆ ದಾಳಿ ನಡೆಸುತ್ತಾನೆ ಎಂದು ಆರೋಪಿಸಿದೆ.
ದೇಶದ ಯುವಪೀಳಿಗೆ ಭಾರತ ಮಾತಾ ಕೀ ಜೈ ಘೋಷಣೆ ಕೂಗುವಂತೆ ಮಾಡಬೇಕು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ ಭಾಗವತ್ ಹೇಳಿದ್ದರು, ಇದಕ್ಕೆ ತಿರುಗೇಟು ನೀಡಿದ ಒವೈಸಿ ನನ್ನ ಕುತ್ತಿಗೆಗೆ ಚಾಕು ಹಿಡಿದರೂ ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗುವುದಿಲ್ಲ ಎಂದು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos