ಹೈದರಾಬಾದ್: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರಿಗೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ಆವರಣ ಪ್ರವೇಶಿಸಲು ನಿರಕಾರಿಸಲಾಗಿದೆ.
ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಹೈದರಾಬಾದ್ ಗೆ ಭೇಟಿ ನೀಡಿರುವ ಕನ್ಹಯ್ಯ ಕುಮಾರ್, ಸಂಜೆ ವಿವಿಗೆ ತೆರಳಿದ್ದರು. ಆದರೆ ಪೊಲೀಸರು ಕನ್ಹಯ್ಯ ಕುಮಾರ್ ಅವರನ್ನು ವಿವಿಯ ಗೇಟ್ ಬಳಿ ತಡೆದಿದ್ದಾರೆ. ಈ ವೇಳೆ ಪೊಲೀಸರ ಹಾಗೂ ಕನ್ಹಯ್ಯ ಕುಮಾರ್ ಬೆಂಬಲಿಗರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ರೋಹಿತ್ ವೇಮುಲಾ ತಾಯಿ ಸಹ ಇದ್ದರು.
ಈ ವೇಳೆ ಮಾತನಾಡಿದ ಕನ್ಹಯ್ಯ ಕುಮಾರ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರ ವಿದ್ಯಾರ್ಥಿಗಳ ನೋವು ಕೇಳಿಸಿಕೊಳ್ಳದಿರುವುದು ದುರದೃಷ್ಟಕರ ಎಂದರು. ಅಲ್ಲದೆ ರೋಹಿತ್ ವೇಮುಲಾಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಹೇಳಿದರು.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಪ್ಪರಾವ್ ಅವರ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಕನ್ಹಯ್ಯ ಕುಮಾರ್ ಅವರಿಗೆ ವಿವಿ ಆವರಣ ಪ್ರವೇಶಕ್ಕೆ ನಿರಾಕರಿಸಿದ್ದಾರೆ.