ಗುಂಟೂರು: ಹೋಳಿ ಆಡಿದ ನಂತರ ಕೃಷ್ಣಾ ನದಿಯಲ್ಲಿ ಈಜಲು ತೆರಳಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿಜಯವಾಡಾದ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಬಿ ಟೆಕ್ ಪ್ರಥಮ ವರ್ಷದ ಮೂವರು ವಿದ್ಯಾರ್ಥಿಗಳು ಹೋಳಿ ಆಡಿದ ನಂತರ ತಡೆಪಲ್ಲಿ ಮಂಡಲ್ ನಲ್ಲಿರುವ ಸೀತಾನಗರಂ ನಲ್ಲಿರುವ ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದಾರೆ. ಶ್ರೀಕಾಂತ್(18 ), ಜಯನಾಗ ಸಾಯಿ(19 ) ಹಾಗೂ ಸುಭಾಷ್(19 ) ನದಿಯಲ್ಲಿ ಮುಳುಗಿ ಮೃತಪಟ್ಟಿರುವ ವಿದ್ಯಾರ್ಥಿಗಳಾಗಿದ್ದಾರೆ.
ಹೋಳಿ ಆಡಿದ ನಂತರ ಈ ಮೂವರು ವಿದ್ಯಾರ್ಥಿಗಳು ಇತರ ಮೂವರು ಸಹಪಾಠಿಗಳೊಂದಿಗೆ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದಾರೆ ಆದರೆ ನದಿಯಿಂದ ಮೇಲೆ ಬರಲು ಸಾಧ್ಯವಾಗದೇ ಮುಳುಗಿದ್ದಾರೆ. ಸಹಾಯಕ್ಕಾಗಿ ಕೂಗುತ್ತಿದ್ದನ್ನು ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರಾದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.