ಚೆನ್ನೈ: ಕಾರು ಕೊಡಿಸುವ ಬೇಡಿಕೆ ಈಡೇರದ ಕಾರಣ 19 ವರ್ಷದ ಯುವಕನೊಬ್ಬ ಸ್ನೇಹಿತರೊಂದಿಗೆ ಸೇರಿ ತನ್ನ ಮನೆಯಲ್ಲೇ ಕಳ್ಳತನ ನಡೆಸಿದ ಘಟನೆ ಚೆನ್ನೈ ನಲ್ಲಿ ನಡೆದಿದೆ.
ಉದ್ಯಮಿ ನಾರಾಯಣ್ ಲಾಲ್ ಅವರ ಹಿರಿಯ ಪುತ್ರ ಮಹೇಂದ್ರನ್(19) ಈ ಘಟನೆಯ ರುವಾರಿಯಾಗಿದ್ದು, ಚಾಣಾಕ್ಷತನದಿಂದ ಕಳ್ಳತನ ಮಾಡಲು ಹೋಗಿ ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಾರು ಕೊಳ್ಳುವ ಬೇಡಿಕೆ ಈಡೇರದ ಕಾರಣ ಮನೆಯಲ್ಲೇ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ ಯುವಕ, ತನ್ನ ಯೋಜನೆಯನ್ನು ಜಾರಿಗೆ ತರುವುದಕ್ಕೂ ಮುನ್ನ ಮನೆಯ ಮುಂಭಾಗದಲ್ಲಿದ್ದ ಸಿಸಿಟಿವಿಯನ್ನು ನಾಶಗೊಳಿಸಿದ್ದಾನೆ. ಆದರೆ ಮನೆಯ ಮುಂಭಾಗದಲ್ಲಿದ್ದ ಬ್ಯಾಂಕ್ ನ ಸಿಸಿಟಿವಿ ಎಲ್ಲಾ ಘಟನಾವಳಿಗಳನ್ನು ಸೆರೆ ಹಿಡಿದಿದ್ದು ಕಳ್ಳತನ ಮಾಡಿದವರನ್ನು ಹಿಡಿಯಲು ನೆರವಾಗಿದೆ.
ನಾರಾಯಣ್ ಲಾಲ್ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ರಾಜಸ್ಥಾನಕ್ಕೆ ತೆರಳಿದ್ದ ವೇಳೆ ಕಳ್ಳತನ ನಡೆದಿದ್ದು, ಮಹೇಂದ್ರನ್ ನ ಇಬ್ಬರು ಸ್ನೇಹಿತರಾದ ಜೀವ(20) ಹಾಗೂ ಕೆ ರಾಜೇಶ್ ಕುಮಾರ್(20) ಕಳ್ಳತನದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಾಗಿದ್ದಾರೆ. ಪೋಷಕರು ರಾಜಸ್ಥಾನಕ್ಕೆ ತೆರಳಿದ್ದನ್ನೇ ಅವಕಾಶವಾಗಿರಿಸಿಕೊಂಡ ಮಹೇಂದ್ರನ್, ಸಹೋದರನನ್ನು ಸಂಬಂಧಿಕರ ಮನೆಗೆ ಕರೆದೊಯ್ದು ಸ್ನೇಹಿತರಿಗೆ ಕಳ್ಳತನ ಮಾಡಲು ಸೂಚನೆ ನೀಡಿದ್ದಾನೆ.
ಸ್ನೇಹಿತನ ಸೂಚನೆಯಂತೆ ಕಳ್ಳತನ ಮಾಡಿದ ಯುವಕರು 7.5 ಲಕ್ಷ ರೂ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ. ಮಹೇಂದ್ರನ್ ಹಾಗೂ ಆತನ ಸಹೋದರ ವಾಪಸ್ ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಸಂಬಂಧಿಕರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರಿಗೆ ಮನೆ ಬಾಗಿಲು ಮುರಿಯದೆ ಕಳ್ಳತನ ಮಾಡಿರುವುದು ಅನುಮಾನ ಮೂಡಿಸಿದ್ದು ಬ್ಯಾಂಕ್ ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಸಿಸಿಟಿವಿಯಲ್ಲಿ ಮಹೇಂದ್ರನ್ ನ ಸ್ನೇಹಿತರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ವಿಚಾರಣೆಗೊಳಪಡಿಸಿದಾಗ ಮಹೇಂದ್ರನ್ ಈ ಕಳ್ಳತನದ ರೂವಾರಿ ಎಂಬುದು ಬಹಿರಂಗವಾಗಿದೆ.