ಡೆಹ್ರಾಡೂನ್: ಸರ್ಕಾರದ ಉಳಿವಿಗಾಗಿ ಇನ್ನು ಎರಡೇ ದಿನದಲ್ಲಿ ಉತ್ತರಾಖಂಡ ಸಿಎಂ ಹರೀಶ್ ರಾವತ್ ವಿಶ್ವಾಸ ಮತ ಯಾಚನೆ ಮಾಡುತ್ತಿದ್ದು, ಇದಕ್ಕೂ ಮೊದಲೆ ಲಂಚಾವತಾರದ ಮತ್ತೊಂದು ವಿಡಿಯೋ ಬಹಿರಂಗವಾಗಿದೆ.
ಕಾಂಗ್ರೆಸ್ ಶಾಸಕರೊಬ್ಬರು ಲಂಚ ಸ್ವೀಕಾರ ಮಾಡಿದ ಕುರಿತು ತಪ್ಪೊಪ್ಪಿಕೊಂಡಿರುವ ಕುಟುಕು ಕಾರ್ಯಾಚರಣೆ ವಿಡಿಯೋವನ್ನು ಖಾಸಗಿ ಸುದ್ದಿವಾಹಿನಿ ಪ್ರಸಾರ ಮಾಡಿದ್ದು, ಪ್ರಕರಣದಿಂದ ಈಗಗಾಲೇ ಸಾಕಷ್ಟು ಮುಜುಗರಕ್ಕೀಡಾಗಿರುವ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ವರ್ಚಸ್ಸಿಗೆ ಮತ್ತೆ ಧಕ್ಕೆಯಾಗಿದೆ. ಕಾಂಗ್ರೆಸ್ ಶಾಸಕ ಮದನ್ ಬಿಶ್ತ್ ಅವರು ಬಂಡಾಯ ಶಾಸಕ ಹರಕ್ ಸಿಂಗ್ ರಾವತ್ ಅವರ ಬಳಿ 12 ಮಂದಿ ಕಾಂಗ್ರೆಸ್ ಶಾಸಕರಿಗೆ ಲಕ್ಷಾಂತರ ರುಪಾಯಿಗಳನ್ನು ನೀಡಿರುವುದರ ಹಿಂದಿನ ಸೂತ್ರಧಾರಿ ತಾನೇ ಎಂದು ಹೇಳಿಕೊಂಡಿದ್ದು, ಉಪಸಭಾಧ್ಯಕ್ಷ ಎಪಿ. ಮೈಖುರಿ ಸೇರಿದಂತೆ 12 ಕಾಂಗ್ರೆಸ್ ಶಾಸಕರಿಗೆ ಪದಚ್ಯುತ ಮುಖ್ಯಮಂತ್ರಿಯ ಪರವಾಗಿ ಲಕ್ಷಾಂತರ ರುಪಾಯಿ ಒದಗಿಸಲಾಗಿತ್ತು ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ರಾವತ್ ಅವರು 25 ಲಕ್ಷ ರೂಪಾಯಿಗಳನ್ನು ಕೆಲವು ಎಂಎಲ್ಎಗಳಿಗೆ ಮತ್ತು ಮೈಖುರಿ ಅವರಿಗೆ 50 ಲಕ್ಷ ರುಪಾಯಿ ನೀಡಿದ್ದಾರೆ ಎಂದು ಬಿಶ್ತ್ ಹೇಳಿದ್ದು, ಕೂಡಾ ವಿಡಿಯೋದಲ್ಲಿ ದಾಖಲಾಗಿದೆ.
‘ನಾನು ಸಂಬಳವನ್ನೇ ಪಡೆದುಕೊಳ್ಳುವುದಿಲ್ಲ, ಆದರೆ ತಿಂಗಳಿಗೆ 5ರಿಂದ 10 ಲಕ್ಷ ರುಪಾಯಿಗಳನ್ನು ಬಯಸಿದಾಗೆಲ್ಲಾ ಮುಖ್ಯಮಂತ್ರಿಯಿಂದ ಪಡೆದುಕೊಳ್ಳುತ್ತೇನೆ’ ಎಂದು ನಿರ್ಲಜ್ಜ ಶಾಸಕ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. "ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಗಳನ್ನು ಅಕ್ರಮ ಗಣಿಗಾರಿಕೆ ಟ್ರಕ್ಗಳ ಬಿಡುಗಡೆಗೆ ಸಂಗ್ರಹಿಸುತ್ತಾರೆ. ಗಣಿಗಾರಿಕೆ ಪರವಾನಗಿಗಳು ಮಾರಾಟ ಮೂಲಕ ರಾವತ್ ಅವರು ಸುಮಾರು 27 ಕೋಟಿ ರುಪಾಯಿ ಸಂಪಾದನೆ ಮಾಡಿದ್ದಾರೆ ಎಂದು ಬಿಶ್ತ್ ವಿಡಿಯೋದಲ್ಲಿ ಹೇಳಿದ್ದಾರೆ. ಇದು ಇದೀಗ ಹರೀಶ್ ರಾವತ್ ಅವರನ್ನು ತೀವ್ರ ಮುಜುಗರಕ್ಕೀಡು ಮಾಡಿದ್ದು, ಪ್ರತಿಪಕ್ಷಗಳು ಇದನ್ನೇ ದಾಳಮಾಡಿಕೊಂಡು ಹರೀಶ್ ರಾವತ್ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.
ಉತ್ತರಾಖಂಡ ಬಿಜೆಪಿ ಮುಖಂಡ ಮತ್ತು ಪಕ್ಷದ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯಾನಂದ್ ಮಾತನಾಡಿ, ಹರೀಶ್ ರಾವತ್ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವ ಸಲುವಾಗಿ ಎಂತಹ ಕೃತ್ಯದಲ್ಲಿ ಬೇಕಿದ್ದರೂ ಪಾಲ್ಗೊಳ್ಳುತ್ತಾರೆ. ಸಿಎಂ ಪದವಿಗಾಗಿ ತಮ್ಮದೇ ಶಾಸಕರನ್ನೂ ಕೂಡ ಖರೀದಿ ಮಾಡುತ್ತಾರೆ ಎಂದು ಹೇಳಿದ್ದಾರೆ.