ನವದೆಹಲಿ: ಕೇಂದ್ರ ಸರ್ಕಾರ ಕಪ್ಪುಹಣದ ವಿರುದ್ಧ ಸಾರಿರುವ ಸಮರವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದು, ಕಳೆದ ನಾಲ್ಕು ದಿನಗಳಲ್ಲಿ(ನ.7) ರಿಂದ ಚಿನ್ನಾಭರಣಗಳ ಮಾರಾಟದ ವಿವರಗಳನ್ನು ನೀಡುವಂತೆ 600 ಚಿನ್ನಾಭರಣ ಮಳಿಗೆಗಳಿಗೆ ಅಬಕಾರಿ ಇಲಾಖೆ ಸೂಚನೆ ನೀಡಿದೆ.
ವರದಿಗಳ ಪ್ರಕಾರ 25 ನಗರಗಳಲ್ಲಿ ಕೇಂದ್ರ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ನಾಲ್ಕು ದಿನಗಳಲ್ಲಿ ಮಾರಾಟವಾಗಿರುವ ಒಟ್ಟು ಚಿನ್ನಾಭರಣಗಳ ಸಂಪೂರ್ಣ ವಿವರಗಳನ್ನು ನೀಡುವಂತೆ ಕೇಂದ್ರ ಅಬಕಾರಿ ಗುಪ್ತಚಹರ ಇಲಾಖೆಯ ಪ್ರಧಾನ ನಿರ್ದೇಶಕ ಕಚೇರಿಯ ಅಧಿಕಾರಿಗಳು ಚಿನ್ನಾಭರಣ ಮಳಿಗೆಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ.
ಕಾರ್ಯಾಚರಣೆ ಭಾಗವಾಗಿ ಪ್ರಮುಖ ಚಿನ್ನಾಭರಣ ಮಳಿಗೆ, ಚಿನ್ನಾಭರಣಗಳ ಉತ್ಪಾದಕ ಘಟಕಗಳಿಗೆ ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, 4 ದಿನಗಳಲ್ಲಿ ಮಾರಾಟಾವಾಗಿರುವ ಒಟ್ಟು ಚಿನ್ನ ಹಾಗೂ ದಾಸ್ತಾನು ಮಾಡಲಾಗಿರುವ ಚಿನ್ನದ ಬಗ್ಗೆ ವಿವರಣೆ ಪಡೆಯಲಿದ್ದಾರೆ.
ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಅಹಮದಾಬಾದ್, ಬೆಂಗಳೂರು, ಹೈದರಾಬಾದ್, ಭೋಪಾಲ್, ವಿಜಯವಾಡ, ನಾಸಿಕ್ ಹಾಗೂ ಲಖನೌ ನಗರಗಳ ಮೇಲೆ ಡಿಜಿಸಿಇಐ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ನಗರಗಳ ಮೇಲೂ ಸಹ ಅಧಿಕಾರಿಗಳು ನಿಗಾವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಚಿನ್ನ ಖರೀದಿಸುವ ಗ್ರಾಹಕರ ಪ್ಯಾನ್ ಕಾರ್ಡ್ ಮಾಹಿತಿ ಪಡೆದು ಚಿನ್ನಾಭರಣಗಳನ್ನು ಮಾರಾಟ ಮಾಡುವಂತೆ ಹಣಕಾಸು ಸಚಿವಾಲಯ ಸೂಚನೆ ನೀಡಿತ್ತು.