ನವದೆಹಲಿ: ಬಿಸಿಸಿಐ ಆಡಳಿತ ಮಂಡಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗೆ ಹೊಸ ಶಿಫಾರಸ್ಸುಗಳನ್ನು ಸಲ್ಲಿಸಿರುವ ನ್ಯಾ.ಆರ್ ಎಂ ಲೋಧಾ ಸಮಿತಿ ಬಿಸಿಸಿಐ ನ ಕೆಲವು ನಿರ್ದಿಷ್ಟ ಪದಾಧಿಕಾರಿಗಳನ್ನು ಕೈಬಿಡುವಂತೆ ಸೂಚಿಸಬೇಕೆಂದು ಹೇಳಿದೆ.
ಸುಪ್ರೀಂ ಕೋರ್ಟ್ ಜುಲೈ ನಲ್ಲಿ ನಿಗದಿಪಡಿಸಿದ್ದ ಮಾನದಂಡಗಳನ್ನು ಅನುಸರಿಸದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನ ಆಡಳಿತವನ್ನು ಬದಲಾವಣೆ ಮಾಡಬೇಕೆಂದು ಶಿಫಾರಸಿನಲ್ಲಿ ಹೇಳಿರುವ ಲೋಧಾ ಸಮಿತಿ ಬಿಸಿಸಿಐನ ರಾಜ್ಯ ಪದಾಧಿಕಾರಿಗಳನ್ನೂ ಸಹ ವಜಾಗೊಳಿಸಬೇಕೆಂದು ಲೋಧಾ ಸಮಿತಿ ಸಲ್ಲಿಸಿರುವ ಹೊಸ ಶಿಫಾರಸ್ಸುಗಳು ಹೇಳಿವೆ. ಕ್ರಿಕೆಟ್ ಮಂಡಳಿಯ ಆಡಳಿತದ ಮೇಲ್ವಿಚಾರಣೆಗಾಗಿ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೈ ಅವರನ್ನು ವೀಕ್ಷಕರನ್ನಾಗಿ ನೇಮಿಸಬೇಕೆಂದು ಸಲಹೆ ನೀಡಿರುವ ಲೋಧಾ ಸಮಿತಿ ಆಡಳಿತ ವರ್ಗದ ಸಿಬ್ಬಂದಿಗಳನ್ನು ನೇಮಕಮಾಡಿ ಅವರ ಸಂಭಾವನೆಯನ್ನು ನಿಗದಿಪಡಿಸಲು ಅನುಮತಿಯನ್ನು ಕೇಳಿದೆ.
ಲೋಧಾ ಸಮಿತಿ ಸೂಚಿಸಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಬಿಸಿಸಿಐ ಪ್ರತಿರೋಧ ತೋರಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ಹಾಗೂ ಸುಪ್ರೀಂ ಕೋರ್ಟ್ ನಡುವೆ ಬಿಕ್ಕಟ್ಟು ಉಂಟಾಗಿದೆ. ಈ ಬೆನ್ನಲ್ಲೇ ಲೋಧಾ ಸಮಿತಿ ಮತ್ತೊಂದಷ್ಟು ಹೊಸ ಶಿಫಾರಸ್ಸುಗಳನ್ನು ಸೂಚಿಸಿದೆ. ಲೋಧಾ ಸಮಿತಿ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಹಿಂದೆಟುಹಾಕಿದ್ದ ಬಿಸಿಸಿಐ ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಬಿಸಿಸಿಐ ನಡೆಯಿಂದ ಮಂಡಳಿಯಲ್ಲಿ ಪಾರದರ್ಶಕತೆ ತರುವುದು ಕಷ್ಟ ಸಾಧ್ಯ ಎಂದು ಹೇಳಿತ್ತು.